ಕೊನೆಯುಸಿರೆಳೆದ ಸಂದೀಪ್ ಉಣ್ಣಿಕೃಷ್ಣನ್ ಚಿಕ್ಕಪ್ಪ
ಮುಂಬಯಿ ದಾಳಿಯಲ್ಲಿ ವೀರಮರಣವನ್ನಪ್ಪಿದವರ ವಿಚಾರದಲ್ಲಿ ಸರಕಾರ ಅನ್ಯಾಯವೆಸಗಿದೆ. ಜತೆಗೆ, ಪಾತಕಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿಯೂ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತೀವ್ರ ಆಕ್ರೋಶಗೊಂಡಿದ್ದ ಮೋಹನನ್, ಸಂಸತ್ ಭವನದ ಎದುರು ಮೂರು ದಿನಗಳ ಹಿಂದೆ ಆತ್ಮಹತ್ಯಾ ಪ್ರಯತ್ನ ನಡೆಸಿದ್ದರು.
ವಿಶೇಷ ಕಾರ್ಯಪಡೆಯ ಮೇಜರ್ ಸಂದೀಪ್ ಉಣ್ಣಿಕೃಷ್ಣನನ್ ದಾಳಿ ವೇಳೆ ಮೃತಪಟ್ಟಿದ್ದರು. ಮೋಹನನ್, ಸಂದೀಪ್ ಅವರ ತಂದೆ ಕೆ. ಉಣ್ಣಿಕೃಷ್ಣನನ್ರ ಕಿರಿಯ ಸೋದರ. ಕೇರಳದ ಕೋಳಿಕ್ಕೋಡ್ನಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸಂದೀಪ್ನನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಹಚ್ಚಿಕೊಂಡಿದ್ದ ಮೋಹನನ್, ಸಂದೀಪ್ನ ಸಾವಿನ ನಂತರ ಮೂರು ವರ್ಷಗಳಿಂದ ತೀವ್ರವಾಗಿ ವ್ಯಾಕುಲಗೊಂಡಿದ್ದರು. ಸಂದೀಪ್ಗೆ ಮರಣೋತ್ತರವಾಗಿ ಅಶೋಕ ಚಕ್ರ ಲಭಿಸಿದಾಗ ಪ್ರೀತಿಯ ಚಿಕ್ಕಪ್ಪ ಸ್ವಲ್ಪ ಮಟ್ಟಿಗೆ ಸಮಾಧಾನ ವ್ಯಕ್ತಪಡಿಸಿದ್ದರು.
ಮೋಹನನ್ ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಸೋದರನ ಆತ್ಮಹತ್ಯೆ ಪ್ರಯತ್ನ ಸುದ್ದಿ ತಿಳಿದು ಉಣ್ಣಿಕೃಷ್ಣನನ್ ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದರು. ಶೇ. 98ರಷ್ಟು ಸುಟ್ಟುಹೋಗಿದ್ದ ಸೋದರನ ದೇಹವನ್ನು ಗುರುತು ಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ.