ದುರಂತ : ಮೃತರ ಕುಟುಂಬಕ್ಕೆ 1 ಲಕ್ಷ ರು. ಪರಿಹಾರ
ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಎಲ್ಲರೂ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಜುಗೇಶ್ ಸಾಥ್, ರಾಜೀವ ಶಾ, ಸತೀಶ್ ಶರ್ಮಾ, ಸಂಜೀವ, ರಾಜಾದೂರ್, ಫಾರೂಕ್ ಜಾಧವ ಹೆಸರುಗಳು ಮಾತ್ರ ಲಭ್ಯವಾಗಿವೆ. ಉಳಿದವರು ಹೆಸರು ತಿಳಿದು ಬಂದಿಲ್ಲ. ಸೋನು, ಸಂತೋಷ, ಪರವಾನಂದ ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಟಿಸಿ ಬ್ರಿಕ್ಸ್ ಕಂಪನಿ ಶ್ರೀನಿವಾಸ್ ಎಂಬುವವರಿಗೆ ಸೇರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫ್ಯಾಕ್ಟರಿಯ ಗೋಡೆ ಇನ್ನೂರು ಅಡಿ ಉದ್ದವಿದ್ದು, ಇಪ್ಪತ್ತೈದು ಅಡಿ ಎತ್ತರವಿದೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಗೋಡೆ ಪಿಲ್ಲರ್ ಗಳ ಸಮೇತ ಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ತರಿಸಲಾಗಿದ್ದು, ಸಿಲುಕಿದವರನ್ನು ಪಾರುಮಾಡುವ ಯತ್ನ ನಡೆಯುತ್ತಿದೆ. ಸ್ಥಳಕ್ಕೆ ಪೊಲೀಸ್ ಪಡೆ ಮತ್ತು ಅಗ್ನಿಶಾಮಕ ದಳ ಮತ್ತು ಆಂಬುಲನ್ಸ್ ಧಾವಿಸಿದ್ದು, ಕಟ್ಟಡದ ಅವಶೇಷದಡಿ ಸಿಲುಕಿರುವ ಕಾರ್ಮಿಕರನ್ನು ಪಾರು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋಡೆ ಕುಸಿದು ಅವಘಡ ಸಂಭವಿಸಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸುಮಾರು 9 ಮಂದಿ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಉತ್ತರ ಭಾರತದವರು. ಮೃತರ ಕುಟುಂಬಕ್ಕೆ 1 ಲಕ್ಷ ಮತ್ತು ಗಾಯಗೊಂಡವರಿಗೆ 25 ಸಾವಿರ ರುಪಾಯಿ ಪರಿವಾರವನ್ನು ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.