ಅಶ್ವಿನಿ ಅಕ್ಕುಂಜಿಗೆ ಪ್ರಾಯೋಜಕತ್ವ ಕೊರತೆ!
ಶನಿವಾರ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ನಮ್ಮದು ಕೃಷಿಕ ಕುಟುಂಬ, ಜೀವನಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ತರಬೇತಿ ಪಡೆಯುವುದು ನನ್ನ ಆಸೆ. ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದು ದೇಶದ ಗೌರವ ತರುವುದು ನನ್ನ ಹೆಬ್ಬೆಯಕೆ. ಆದರೆ, ಈ ಆಸೆ ಈಡೇರಲು ಹಣದ ಅವಶ್ಯಕತೆ ಇದ್ದು, ಯಾರಾದರೂ ಸಹಾಯ ಮಾಡಲು ಮುಂದಾಗಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಅಶ್ವಿನಿ ಅಪ್ಪಟ ಗ್ರಾಮೀಣ ಪ್ರತಿಭೆ. ಏಷ್ಯನ್ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದರೂ ಸರಕಾರವಾಗಲಿ, ಕಾರ್ಪೋರೇಟ್ ಕಂಪನಿಗಳಾಗಲಿ ಧನಸಹಾಯಕ್ಕೆ ಮುಂದೆ ಬಂದಿಲ್ಲ. ಕ್ರಿಕೆಟ್ ಟೂರ್ನಿಗೆ ಕಾರ್ಪೋರೇಟ್ ಕಂಪನಿಗಳು ನಾ ಮುಂದು ತಾಮುಂದು ಎಂದು ಮುಗಿ ಬೀಳುತ್ತವೆ. ಆದರೆ, ಉಳಿದ ಕ್ರೀಡಾಪಟುಗಳನ್ನು ಮಾತನಾಡಿಸುವಷ್ಟು ಸಮಯ ಈ ಕುಬೇರ ಕಂಪನಿಗಳಿಗಿಲ್ಲ.
ರಾಜ್ಯದ ರಾಜಧಾನಿ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿಕೊಂಡಿದೆ. ಅನೇಕ ಸಾಫ್ಟ್ ವೇರ್ ಕಂಪನಿಗಳು ನಮ್ಮ ರಾಜ್ಯದ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಕೋಟ್ಯಂತರ ರುಪಾಯಿ ಲಾಭ ಗಳಿಸಿವೆ ಮತ್ತು ಗಳಿಸುತ್ತಿವೆ. ಹೀಗಾಗಿ ಕಾರ್ಪೋರೇಟರ್ ವಲಯದ ದಿಗ್ಗಜರು ಅಶ್ವಿನಿಯಂಥ ಕ್ರೀಡಾಪಟುಗಳ ಕಡೆಗೆ ಕಣ್ಣು ಹಾಯಿಸಬೇಕು ಎನ್ನುವುದು ಕನ್ನಡಿಗರ ಅಶಯವಾಗಿದೆ.(ಕಾಮನ್ ವೆಲ್ತ್ ಗೇಮ್ಸ್)