ಸದ್ಯಕ್ಕೆ ಕಟ್ಟಾ ಬಂಧನವಿಲ್ಲ : ಸಂತೋಷ ಹೆಗ್ಡೆ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ನಡೆಸುವ ತನಿಖೆಗೆ ಸಹಕರಿಸದಿದ್ದರೆ, ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದರೆ ಹಾಗೂ ತಲೆ ಮರೆಸಿಕೊಳ್ಳಲು ಯತ್ನಿಸಿದರೆ ಮಾತ್ರ ಅವರನ್ನು ಬಂಧಿಸುವ ಚಿಂತನೆ ನಡೆಸುವುದಾಗಿ ಸ್ಪಷ್ಟಪಡಿಸಿದರು. ಸಾಕ್ಷಿ ನಾಶಪಡಿಸಲು ಹೋಗಿ ಲೋಕಾಯುಕ್ತರ ಕೈಗೆ ಸಿಕ್ಕು ಪರಪ್ಪನ ಅಗ್ರಹಾರ ಸೇರಿದ್ದ ಕಟ್ಟಾ ಪುತ್ರ ಜಗದೀಶ್ ಕಟ್ಟಾ ಕೂಡ ಬಿಬಿಎಂಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ನಾನು ನಿರಪರಾಧಿ : ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ದಟ್ಟವಾಗುತ್ತಿದ್ದಂತೆಯೇ ಟಿವಿ 9 ವಾಹಿನಿ ಜೊತೆಗೆ ಮಾತನಾಡಿದ ಕಟ್ಟಾ, ನಾನು ನಿರಪರಾಧಿ. ನನ್ನನ್ನು ಸಂಚಿನಲ್ಲಿ ಸಿಲುಕಿಸಲಾಗಿದೆ. ನನ್ನ ಜೀವನದಲ್ಲಿ ಎಂದಿಗೂ ನಾನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದವನಲ್ಲ. ಆದರೆ, ಇದೀಗ ನನ್ನ ವಿರುದ್ದ 10 ಕೇಸುಗಳನ್ನು ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಕ್ಕೆ ಹಾಗೂ ಸರಕಾರಕ್ಕೆ ಮುಜುಗರ ಆಗಬಾರದು ಎಂದು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೆಐಎಡಿಬಿ ಹಗರಣದಲ್ಲಿ ನನ್ನ ಹೆಸರು ಕೇಳಿ ಬಂದಾಗಲೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದುಕೊಂಡಿದ್ದೆ. ಆದರೆ, ಹಿರಿಯರ ಸಲಹೆ ಮೇರೆಗೆ ಇದೀಗ ರಾಜೀನಾಮೆ ನೀಡುತ್ತಿರುವುದಾಗಿ ಕಟ್ಟಾ ವಿವರಿಸಿದರು.
ಲೋಕಾಯುಕ್ತರ ನಡೆಸುವ ಎಲ್ಲ ತನಿಖೆಗೆ ಸಹಕರಿಸುವುದಾಗಿ ಹೇಳಿದ ಕಟ್ಟಾ, ನ್ಯಾಯಾಲಯದಲ್ಲಿ ಎಲ್ಲ ಪ್ರಕರಣಗಳನ್ನು ಎದುರಿಸುವುದಾಗಿ ಅವರು ಹೇಳಿದರು. ಕೆಐಎಡಿಬಿ ಹಗರಣದಲ್ಲಿ ಕಟ್ಟಾ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.