ಶಾಸಕರ ಅನರ್ಹತೆ : ವಾದ ಪ್ರತಿವಾದ ಮುಕ್ತಾಯ

ವಾದಿಗಳ ಪರ ನ್ಯಾಯವಾದಿಗಳಾದ ಕೆಜಿ ರಾಘವನ್, ಬಿವಿ ಆಚಾರ್ಯ ಮತ್ತು ಪ್ರೊ. ರವಿವರ್ಮ ಅವರು ವಾದವನ್ನು ಮಂಡಿಸಿದರೆ, ಪ್ರತಿವಾದಿ ಪರ, ಅಂದರೆ ಬಿಜೆಪಿ ಸರಕಾರದ ಪರ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ಮತ್ತು ಸತ್ಯಪಾಲ್ ಜೈನ್ ವಾದ ಮಂಡಿಸಿದ್ದಾರೆ.
ಅನರ್ಹರಾದ ಬಿಜೆಪಿ ಶಾಸಕರು ಸರಕಾರದ ವಿರುದ್ಧವಾಗಿ ಯಾವುದೇ ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ. ಕೇವಲ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಅನರ್ಹಗೊಂಡ ಶಾಸಕರು ತಾವಾಗಿಯೇ ಪಕ್ಷವನ್ನು ತೊರೆದಿಲ್ಲ. ಭಿನ್ನಮತವೇನಿದ್ದರೂ ಯಡಿಯೂರಪ್ಪನವರ ವಿರುದ್ಧವೇ ಹೊರತು ಬಿಜೆಪಿಯ ಪರ ಅಲ್ಲ. ಆದ್ದರಿಂದ ಅನರ್ಹಗೊಳಿಸಿದ್ದು ಸಿಂಧುವಾಗುವುದಿಲ್ಲ ಎಂದು ಅನರ್ಹಗೊಂಡ ಶಾಸಕರ ಪರ ವಾದ ಮಂಡಿಸಲಾಗಿದೆ.
ಆದರೆ, ಸರಕಾರದ ಪರ ವಾದ ಮಂಡಿಸಿರುವ ನ್ಯಾಯವಾದಿಗಳು, ಅನರ್ಹಗೊಂಡ ಶಾಸಕರು ಪಕ್ಷಾಂತರ ಮಾಡಿದ್ದು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಅನರ್ಹಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಪ್ರಕರಣ ಮೊದಲು ಮುಖ್ಯ ನ್ಯಾಯಮೂರ್ತಿ ಜಗದೀಶ್ ಖೇಹರ್ ಮತ್ತು ನ್ಯಾ. ಎನ್ ಕುಮಾರ್ ಅವರ ಎದುರಿಗೆ ಬಂದಿತ್ತು. ಶಾಸಕರನ್ನು ಅನರ್ಹಗೊಳಿಸಿ ಸಭಾಧ್ಯಕ್ಷರು ಸ್ವಾಭಾವಿಕ ನ್ಯಾಯ ಉಲ್ಲಂಘಿಸಿಲ್ಲ, ನಿಯಮ ಗಾಳಿಗೆ ತೂರಿಲ್ಲ ಮತ್ತು ದುರುದ್ದೇಶದಿಂದ ಕೂಡಿಲ್ಲ ಎಂದು ತೀರ್ಪು ನೀಡಿದ್ದರು. ಆದರೆ, ಶಾಸಕರು ತಾವಾಗಿಯೇ ಪಕ್ಷ ತ್ಯಜಿಸಿದ್ದಾರೆಯೆ ಎಂಬ ಏಕೈಕ ವಿಷಯ ಕುರಿತು ವಿಭಿನ್ನ ತೀರ್ಪು ನೀಡಿದ್ದರು. ಆದ್ದರಿಂದ ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು.
ಎರಡು ದಿನ ನಡೆದ ಸುದೀರ್ಘ ವಾದ ಪ್ರತಿವಾದಗಳನ್ನು ಆಲಿಸಿರುವ ನ್ಯಾಯಮೂರ್ತಿ ವಿಜಿ ಸಭಾಹಿತ್ ಅವರ ನೀಡಲಿರುವ ತೀರ್ಪಿನತ್ತ ಇಡೀ ನಾಡು ಕಾತರದಿಂದ ನೋಡುತ್ತಿದೆ. ವಾದಿ ಪ್ರತಿವಾದಿಗಳಿಬ್ಬರೂ ಜಯ ತಮ್ಮದೇ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ. ನ್ಯಾ. ಸಭಾಹಿತ್ ಅವರು ನೀಡುವ ತೀರ್ಪಿನ ಮೇಲೆ ಸರಕಾರದ ಅಳಿವು ಉಳಿವು ನಿಂತಿದೆ. ತೀರ್ಪಿನ ಲಾಭ ಪಡೆಯಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆಯಲು ತುದಿಗಾಲಲ್ಲಿ ನಿಂತಿವೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications