ಸಿದ್ದರಾಮಯ್ಯ ಅಯ್ಯೋ ಪಾಪ ಎಂದು ಶೋಭಾ

ಬಿಜೆಪಿ ನಾಚಿಕೆ ಮಾನ ಮರ್ಯಾದೆ ಇಲ್ಲದ ಸರಕಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡುತ್ತಿದ್ದಾರೆ, ಇನ್ನೊಂದಡೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿದ್ದರಾಮಯ್ಯ ವಿರುದ್ಧ ಗಹಗಹಿಸಿ ನಗುತ್ತಲೇ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ಆರಂಭಿಸಿದೆ. ಕಾಂಗ್ರೆಸ್ ಶಾಸಕರಿಗೆ ಗಾಳಿ ಹಾಕಿದೆ. 53 ಶಾಸಕರನ್ನು ಸಂಪರ್ಕಿಸಿದ್ದಾರೆ. ಬಿಜೆಪಿ ಬಂದರೆ 50 ಕೋಟಿ ರುಪಾಯಿ ಮತ್ತು ಮಂತ್ರಿಗಿರಿ ಆಮಿಷವನ್ನು ಒಡ್ಡಿದ್ದಾರೆ. ಶೋಭಾ ಕರಂದ್ಲಾಜೆ ಸೇರಿದಂತೆ ಸಿಎಂ ವಲಯದ ಕೆಲ ಸಚಿವರುಗಳು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳ್ತಾನೇ ಇದಾರೆ.
ಸಿದ್ದರಾಮಯ್ಯ ಅವರು ಬರೀ ಆರೋಪ ಮಾಡುವುದಲ್ಲ. 50 ಕೋಟಿ ರುಪಾಯಿ ಮತ್ತು ಮಂತ್ರಿಗಿರಿಯನ್ನು ಯಾವ ಕಾಂಗ್ರೆಸ್ ಶಾಸಕರಿಗೆ ನಾವು ಅಮಿಷವೊಡ್ಡಿದ್ದೇವೆ ಎಂಬುದನ್ನು ಅವರು ಮೊದಲು ಬಹಿರಂಗಗೊಳಿಸಲಿ ಎನ್ನುವುದು ಶೋಭಾ ಒತ್ತಾಯ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಜನಾದೇಶದ ಸರಕಾರವನ್ನು ಬೀಳಿಸುವ ಮೂಲಕ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದ ಸಿದ್ದರಾಮಯ್ಯ, ಅದರಲ್ಲಿ ವಿಫಲರಾಗಿದ್ದಾರೆ. ಕೈಲಾಗದವನು ಮೈಯೆಲ್ಲ ಪರಚಿಕೊಂಡ ಅನ್ನುವ ಹಾಗೆ, ಸರಕಾರದ ವಿರುದ್ಧ ಆರೋಪಕ್ಕೆ ಇಳಿದಿದ್ದಾರೆ ಎಂದು ಶೋಭಾ ಲೇವಡಿ ಮಾಡಿದ್ದಾರೆ.
ಶಾಸಕ ಸುರೇಶಗೌಡರಿಗೆ ಅಮಿಷವೊಡ್ಡಲು ಸಚಿವೆ ಶೋಭಾ ಅವರು ಸಾರಥ್ಯ ವಹಿಸಿದ್ದಾರೆ. ಅದಕ್ಕೆ ಬೇಕಿರುವ ಎಲ್ಲ ದಾಖಲೆಗಳು ನಮ್ಮ ಬಳಿ ಎಂದು ಸಿದ್ದರಾಮಯ್ಯ ಸೋಮವಾರ ಆರೋಪಿಸಿದ್ದರು. ಇನ್ನೊಂದು ಮೂಲಗಳು ಪ್ರಕಾರ ಬಿಜೆಪಿ ಮತ್ತೆ ಆಪರೇಷನ್ ಕಮಲ ಆರಂಭಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನ 12 ಶಾಸಕರನ್ನು ಸೆಳೆಯಲು ಕಾರ್ಯಾತಂತ್ರ ರೂಪಿಸಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಯಾವ ಸುದ್ದಿಯನ್ನೂ ಒಪ್ಪಲೊಲ್ಲದ ಶೋಭಾ ಮಾತ್ರ ಅವಕಾಶ ವಂಚಿತ ಸಿದ್ದು ಅವರ ಹತಾಶ ಸ್ಥಿತಿ ಕಂಡು ಮಮ್ಮಲ ಮರುಗಿದರು. ಅಯ್ಯೋ ಪಾಪ, ಸಿದ್ದಪ್ಪ ಎಂದು ಉದ್ಗಾರ ತೆಗೆದಿದ್ದಾರೆ.
ಆಪರೇಷನ್ ಕಮಲಕ್ಕೆ ಬಲಿಯಾಗುವ ಶಾಸಕರು?
ಎಂ ಶ್ರೀನಿವಾಸ್(ಮಂಡ್ಯ), ಕೆ ಪಿ ಬಚ್ಚೇಗೌಡ(ಚಿಕ್ಕಬಳ್ಳಾಪುರ), ರಮೇಶ್ ಬಂಡಿಸಿದ್ದೇಗೌಡ(ಶ್ರೀರಂಗಪಟ್ಟಣ), ಕೆ ಬಿ ಚಂದ್ರಶೇಖರ್(ಕೆಆರ್ ಪೇಟೆ), ಮಂಜುನಾಥ(ಹುಣಸೂರು), ಬಿಬಿ ರಾಮಸ್ವಾಮಿಗೌಡ(ಕುಣಿಗಲ್), ಸುರೇಶಗೌಡ(ನಾಗಮಂಗಲ) ಅವರನ್ನು ಬಿಜೆಪಿ ಸಚಿವರು ಮತ್ತು ಶಾಸಕರು ಸಂಪರ್ಕಿಸಿದ್ದಾರೆ. ಮುಖ್ಯಮಂತ್ರಿಗಳ ಅಪ್ತ ವಲಯದ ಮೂವರು ಸಚಿವರು ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ.











Click it and Unblock the Notifications