ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಬೀಳಿಸುತ್ತೇನೆ ಆಮೇಲೆ ನೋಡಿ: ಕುಮಾರಸ್ವಾಮಿ

By Mahesh
|
Google Oneindia Kannada News

HD Kumaraswamy
ಚೆನ್ನೈ/ಬೆಂಗಳೂರು, ಅ.10: 'ಸಾರ್, ನಿಮ್ಮ ಬಳಿ ಎಷ್ಟು ಜನ ಶಾಸಕರಿದ್ದಾರೆ ಹೇಳಿ ಎಂದು ಮಾಧ್ಯಮದವರು ಪರಿಪರಿ ಕೇಳಿದರೂ, ಆ ಬಗ್ಗೆ ಸೂಚನೆ ನೀಡರೆ ಸೋಮವಾರ ನೀವೆ ನೋಡಿ ಎಂದು ಚೆನ್ನೈನ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಅವರ ಬೆನ್ನ ಹಿಂದೆ ನಿಂತ ಬಿಜೆಪಿಯ ಅತೃಪ್ತ ಶಾಸಕರ ಮೊಗದಲ್ಲಿ ಮುಗುಳ್ನಗೆ ಮಾಯವಾಗಿದ್ದರೂ, ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ದೃಢಸಂಕಲ್ಪ ಎದ್ದು ಕಾಣುತ್ತಿತ್ತು.

ಕೆಲವು ದಿನಗಳಿಂದ ನಡೆದಿದ್ದ ರಾಜಕೀಯ ರಿಯಾಲಿಟಿ ಷೋಗೆ ನಾಳೆ ತೆರೆ ಬೀಳಲಿದ್ದು, ಅ.11 ರ ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ರಾಜ್ಯಪಾಲರ ಖಡಕ್ ಪತ್ರವನ್ನು ಸ್ಪೀಕರ್ ಮನ್ನಿಸಿ ಪಾಲಿಸಿದ್ದರೆ ಆದರೆ, ಯಡಿಯೂರಪ್ಪ ಅವರಿಗೆ ಸೋಲು ಖಚಿತ.

ಚೆನ್ನೈನಲ್ಲಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಮುಖ್ಯಾಂಶಗಳು:

ನಾವು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿಲ್ಲ. ಯಡಿಯೂರಪ್ಪ ಅವರ ದುರಾಡಳಿತಕ್ಕೆ ಬೇಸತ್ತು ನೊಂದಿವರ ನನ್ನ ಹಳೆ ಸ್ನೇಹಿತರಿಗೆ ಬೆಂಬಲ ನೀಡಿದ್ದೇನೆ. ಭಿನ್ನಮತೀಯರನ್ನು ಸೆಳೆಯಲು ಸ್ಪೀಕರ್ ಸ್ಥಾನವನ್ನು ಬಳಕೆ ಮಾಡಿದೆ. 'ಇದು ಧರ್ಮ ಅಧರ್ಮದ ಸಂಘರ್ಷ. ಹಣ ಹಾಗೂ ಅಧಿಕಾರದ ಮೋಹ ನಮಗಿಲ್ಲ. ನಾವು ಹಣದ ಪ್ರಭಾವ ಬೀರಿಲ್ಲ.ಕುದುರೆ ವ್ಯಾಪಾರ ಮಾಡುವಷ್ಟು ಹಣವೂ ಇಲ್ಲ.ನಾನೇನು ಅಕ್ರಮ ಗಣಿಗಾರಿಕೆ ನಡೆಸಿ ಹಣ ಗಳಿಸಿಲ್ಲ.

ಇದು ಬಿಜೆಪಿ ಸರ್ಕಾರ ಕಿತ್ತೊಗೆಲು ತೆಗೆದುಕೊಂಡ ನಿರ್ಧಾರ. ಗೋಲಿ ಆಡುವಾಗಲಿಂದಲೂ ಸೋತಿಲ್ಲ ಎಂದವರಿಗೆ ಸೋಲಿನ ರುಚಿ ಏನೆಂದು ತಿಳಿಯಲಿದೆ. ನಾವು ಯಾವುದೇ ಶಾಸಕರನ್ನು ಕಟ್ಟಿ ಹಾಕಿಲ್ಲ.ರಾಜ್ಯದ ಹಿತದೃಷ್ಟಿಯಿಂದ ಅವರು ತೆಗೆದುಕೊಂಡ ನಿರ್ಣಯ ಎಂದು ಕುಮಾರಸ್ವಾಮಿ ಹೇಳಿದರು.

ಬಂಡಾಯ ಶಾಸಕರ ವಿರುದ್ಧ ಸ್ಪೀಕರ್ ತೆಗೆದುಕೊಳ್ಳುವ ನಿರ್ಣಯದ ಮೇಲೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಪಾಲ್ಗೊಳ್ಳಬೇಕೆ, ಬೇಡವೇ ಅಥವಾ ಪಾಲ್ಗೊಂಡು ಸರ್ಕಾರದ ವಿರುದ್ಧ ಮತ ಚಲಾಯಿಸಬೇಕೆ ಎಂಬುದನ್ನು ಇಂದು ರಾತ್ರಿ ವೇಳೆಗೆ ನಿರ್ಧರಿಸಲಿದ್ದೇವೆ ಎಂದಿದ್ದಾರೆ.

ರಾಜ್ಯಪಾಲರ ಗ್ರ್ಯಾಂಡ್ ಎಂಟ್ರಿ: ಒಂದೆಡೆ ಅತೃಪ್ತ ಶಾಸಕರ ಅನರ್ಹತೆ ಕೋರಿ ಸಿಎಂ ಮನವಿ ಪರಿಶೀಲನೆ ಹಾಗೂ ಬಂಡಾಯ ಶಾಸಕರ ಪರ ವಕೀಲರು ಏಳು ದಿನ ಕಾಲಾವಾಕಾಶ ಕೋರಿ ನೋಟಿಸ್ ಗೆ ನೀಡಿದ್ದ ಉತ್ತರವನ್ನು ಸ್ಪೀಕರ್ ಬೋಪಯ್ಯ ಅವರು ಶಾಸಕರ ಭವನದಲ್ಲಿ ಪರಿಶೀಲಿಸುತ್ತಿದ್ದಾರೆ. ಶಾಸಕರ ಪರ ವಕೀಲ ರಾಘವನ್ ಅವರ ವಾದವನ್ನು ಆಲಿಸಿರುವ ಸ್ಪೀಕರ್ ಈ ಬಗ್ಗೆ ನಿರ್ಣಯವನ್ನು ನಾಳೆ ಪ್ರಕಟಿಸುವುದಾಗಿ ಹೇಳಿದ್ದಾರೆ.

ಆದರೆ, ಇಂದು ಸಭಾಪತಿ ಬೋಪಯ್ಯ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು ಪತ್ರ ರವಾನಿಸಿದ್ದು, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅತೃಪ್ತ ಶಾಸಕರ ಬಗ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು, ಅ.6 ರಂದು ಇದ್ದ ಶಾಸಕರ ಸಂಖ್ಯಾಬಲವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಬ್ಬರು ಪ್ರತಿನಿಧಿಗಳು ಸದನದಲ್ಲಿ ಭಾಗವಹಿಸಲಿದ್ದಾರೆ. ಒಂದು ವೇಳೆ ನನ್ನ ಸೂಚನೆಗಳನ್ನು ಪಾಲಿಸದಿದ್ದಾರೆ. ಮುಂದೆ ನಾನು ಕೈಗೊಳ್ಳುವ ಕ್ರಮವೇ ಅಂತಿಮ ಎಂದು ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ನಿಷೇಧಾಜ್ಞೆ: ಇದು ಸಂಜೆ ಆರು ಗಂಟೆಯಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಅ.11 ರಂದು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ನೌಕರರಿಗೆ ಅರ್ಧದಿನದ ರಜೆಯನ್ನು ಬಿಜೆಪಿ ಸರ್ಕಾರ ಘೋಷಿಸಿದೆ. ವಿಜಯೋತ್ಸವವನ್ನು ರದ್ದುಗೊಳಿಸಲಾಗಿದೆ. 5 ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. ನಾಳೆ ಆಯಾಕಟ್ಟಿನ ಪ್ರದೇಶಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಅಯುಕ್ತ ಶಂಕರ್ ಬಿದರಿ ಸೂಚಿಸಿದ್ದಾರೆ.

ರೆಸಾರ್ಟ್ ನತ್ತ ಬಿಜೆಪಿ ಶಾಸಕರು :ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಬಂದ ಕೃಷ್ಣಯ್ಯ ಶೆಟ್ಟಿ ಅವರನ್ನು ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಶಾಸಕರ ದಂಡು ಸ್ವಾಗತಿಸಿ ಜೊತೆಯಲ್ಲಿ ಕರೆದೊಯ್ದಿದ್ದು ವಿಶೇಷ. ಈ ನಡುವೆ ಕಾಣೆಯಾಗಿದ್ದ ಆನಂದ್ ಸಿಂಗ್ ಅವರು ಶ್ರೀರಾಮುಲು ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರೊಡನೆ ಪ್ರತ್ಯಕ್ಷರಾಗಿದ್ದಾರೆ.

ಭಾವಿ ಸಿಎಂ, ಡಿಸಿಎಂ ಭೇಟಿ, ಚರ್ಚೆ: ಏತನ್ಮಧ್ಯೆ ನಗರ ಏಟ್ರಿಯಾ ಹೊಟೇಲ್ ನಲ್ಲಿ ಸಿದ್ದರಾಮಯ್ಯ ಹಾಗೂ ರೇವಣ್ಣ ಅವರು ರಾಜಕೀಯ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು. ರಜಾದಿನದಲ್ಲಿ ಶಾಸಕರ ಕಚೇರಿಯಲ್ಲಿ ಕೂತು ಕೆಲ್ಸ ಮಾಡೋ ಪ್ರಮೇಯ ಏನಿದೆ. ಸ್ಪೀಕರ್ ನಡೆದುಕೊಳ್ಳುತ್ತಿರುವುದು ಸರಿಯಿಲ್ಲ. ಶಾಸಕರನ್ನು ನೋಟಿಸ್ ನೀಡಿರುವುದು ಸರಿಯಿಲ್ಲ ಎಂದು ರೇವಣ್ಣ ಸಿಡಿಮಿಡಿಗೊಂಡರು.

ನಮ್ಮ ಶಾಸಕರು ಈಗ ಆಗಮಿಸುತ್ತಿದ್ದಾರೆ. ಎರಡೂ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು, ನಾಳೆ ಸರ್ಕಾರ ಬೀಳಿಸುವ ವಿಶ್ವಾಸವನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದರು.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X