ರೆಡ್ಡಿ ಸಂಧಾನಕ್ಕೆ ತಲೆಬಾಗಿದ ಬಿಜೆಪಿ ಹಿರಿತಲೆಗಳು

ಭಿನ್ನಮತೀಯ ಜೊತೆ ಸೇರಿಕೊಂಡು ಬೆಂಬಲ ವಾಪಾಸ್ ಪತ್ರಕ್ಕೆಸಹಿ ಹಾಕಿದ್ದ ಬೆಳ್ಳುಬ್ಬಿ ಅವರ ಬೆನ್ನ ಹಿಂದೆ ಇನ್ನೂ ಅನೇಕ ಶಾಸಕರು ಇಂದು ಶ್ರೀರಾಮುಲು ನಿವಾಸಕ್ಕೆ ಆಗಮಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ದೇವರ ಮೊರೆಹೊಕ್ಕ ಸಿಎಂಗೆ ಮತ್ತೊಮ್ಮೆ ರೆಡ್ಡಿ ಸೋದರರು ಸಂಧಾನಕಾರರಾಗಿ ಯಶಸ್ಸು ತರುವ ನಿರೀಕ್ಷೆಯಿದೆ.
'ಇತಿಹಾಸವನ್ನು ಅವಲೋಕಿಸಿದರೆ ಯುದ್ಧಕ್ಕೂ ಮೊದಲು, ಯುದ್ಧದ ಆರಂಭದಲ್ಲಿ, ಯುದ್ಧದ ಸಂದರ್ಭದಲ್ಲಿ ಹಾಗೂ ಯುದ್ಧದ ನಂತರ ಕೂಡ ಸಂಧಾನ ನಡೆಯುವುದನ್ನು ಕಾಣಬಹುದು. ಇದು ಆಂತರಿಕ ಸಂಧಾನವಾದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ' ಎಂದು ರಾಮ ಭಕ್ತ ಶಾಸಕ ಸಿಟಿ ರವಿ ಅವರು ಮುಂಜಾನೆ ಹೇಳಿದ್ದನ್ನು ಕಾರ್ಯಗತ ಮಾಡುವತ್ತ ರೆಡ್ಡಿ ಸೋದರರು ನಿರತರಾಗಿದ್ದಾರೆ.
'ಸೆ.11ನೇ ತಾರೀಖು 11 ಗಂಟೆಗೆ 6 ಕೋಟಿ ಕನ್ನಡಿಗರ ಎದುರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ತಲೆ ತಗ್ಗಿಸಲಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಂಥ ಕೀಳುಮಟ್ಟಕ್ಕೆ ಇಳಿದಿರುವುದು ದುರದೃಷ್ಟ. ಕರ್ನಾಟಕದ ಅಭಿವೃದ್ಧಿಗಾಗಿ ಜನಾದೇಶ ಪಡೆದ ಬಿಜೆಪಿ ಸರ್ಕಾರ, ಜನತೆಗೆ ಮೋಸ ಮಾಡುವುದಿಲ್ಲ. ಇಂದು ಸಂಜೆ ಬಿಜೆಪಿಯ ಎಲ್ಲಾ ನಿಷ್ಠಾವಂತ ಶಾಸಕರು ನಮ್ಮ ಬಳಿಗೆ ಬರಲಿದ್ದಾರೆ ನಂತರ ರಾಜ್ಯಪಾಲರ ನಿವಾಸಕ್ಕೆ ತೆರಳಿ ಬೆಂಬಲ ಹಿಂಪೆಡದ ಪತ್ರವನ್ನು ಪುರಸ್ಕರಿಸದಂತೆ ಮನವಿ ಸಲ್ಲಿಸಲಾಗುವುದು' ಎಂದು ಜನಾರ್ದನ ರೆಡ್ಡಿ ಹೇಳಿದರು.
ಇತ್ತ ಜನಾರ್ಧನ ರೆಡ್ಡಿ ಸಂಧಾನ ಸಫಲವಾಗುತ್ತಿದ್ದಂತೆ ಪ್ರತಿಪಕ್ಷಗಳ ಮುಖಂಡರ ಮುಖದಲ್ಲಿ ಮೂಡಿದ್ದ ಮಂದಹಾಸ ಮಾಯವಾಗಿದೆ. ತುರ್ತು ಶಾಸಕಾಂಗ ಸಭೆಯನ್ನು ಕರೆದಿರುವ ಸಿದ್ದರಾಮಯ್ಯ ಅವರು, ಬೆಳಗ್ಗಿನಿಂದ ಟಿವಿಗೆ ಅಂಟಿಕೊಂಡು ರಾಜಕೀಯ ಬೆಳವಣಿಗೆಗಳ ಏರಿಳಿತವನ್ನು ನೋಡುತ್ತಿದ್ದಾರೆ. ನಾಳೆ ಬಿಜೆಪಿ ಸರ್ಕಾರದ ಇನ್ನೊಂದು ಹಗರಣ ಬಹಿರಂಗಪಡಿಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಲು ಸದ್ಯ್ಯದಲ್ಲೇ ಸುದ್ದಿಗೋಷ್ಠಿ ಕರೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.












Click it and Unblock the Notifications