ಸಾಫ್ಟ್ ವೇರ್ ಕಂಪೆನಿ ಮಾಹಿತಿ ಕದ್ದ ಟೆಕ್ಕಿ ಮಾಯ
ಸುಖ ಬೀರ್ ಬೆನ್ನಿಪಲ್ ಒಡೆತನದ ಕೋರಮಂಗಲದಲ್ಲಿರುವ ಬೆನ್ನಿಪಲ್ ಟೆಕ್ನಾಲಜೀಸ್ ಕಂಪೆನಿ, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ರಾಜೀವ್ ಭಂಡಾರ್ ಕರ್ ಎಂಬ ಉದ್ಯೋಗಿ, ಸಂಸ್ಥೆಗೆ ಸೇರಿದ ಅತ್ಯಮೂಲ್ಯ ದತ್ತಾಂಶವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ. ಕಳುವಾಗಿರುವ ಮಾಹಿತಿಯ ಬೆಲೆ ಸುಮಾರು ಕೋಟಿ ರು ಬೆಲೆ ವೆಚ್ಚದ್ದಾಗಿದೆ. ಮಾಹಿತಿಯನ್ನು ಇತರೆ ಕಂಪೆನಿಗಳಿಗೆ ಮಾರಿರುವ ಸಾಧ್ಯತೆ ಕೂಡಾ ಇದೆ ಎಂದು ಬೆನ್ನಿಪಲ್ ದೂರಿನಲ್ಲಿ ಹೇಳಿದ್ದಾರೆ.
ಘಟನೆ ಹಿನ್ನೆಲೆ: ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ರಾಜೀವ್ ಉತ್ತಮವಾಗಿ ಕೆಲಸ ನಿರ್ವಹಿಸದ ಕಾರಣ ನೀಡಿ ಕಂಪೆನಿಯಿಂದ ಹೊರಹಾಕಲಾಗಿತ್ತು. ಆದರೆ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ರಾಜೀವ್ ಮಾಡಿದ ಮನವಿಯನ್ನು ಒಪ್ಪಿಕೊಂಡ ಕಂಪೆನಿ, ಕೆಲಸದಲ್ಲಿ ಮುಂದುವರೆಯುವಂತೆ ಸೂಚಿಸುತ್ತದೆ.
ಆದರೆ, ಕೆಲಸಕ್ಕೆ ಹಾಜರಾದ ಕೆಲ ಸಮಯದಲ್ಲೇ ಡಾಟಾ ಸೆಂಟರ್ ವಿಭಾಗಕ್ಕೆ ಕಾಲಿಟ್ಟ ರಾಜೀವ್ ಅಮೂಲ್ಯ ದಾಖಲೆಗಳನ್ನು ತನ್ನ ಪೆನ್ ಡ್ರೈವ್ ಗೆ ವರ್ಗಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ತಿಳಿದ ಸಂಸ್ಥೆಯ ನಿರ್ದೇಶಕ ಸುಖ್ ಬೀರ್, ಕೂಡಲೇ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜನವರಿಯಲ್ಲಿ ಕೆಲಸಕ್ಕೆ ಸೇರಿದ ರಾಜೀವ್ ಕೋಡಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೀವ್ ಗೆ ಕಂಪೆನಿಯ ಮುಖ್ಯ ಸರ್ವರ್ ಗೆ ಸಂಪರ್ಕ ಸಾಧಿಸುವ ಅವಕಾಶವಿತ್ತು. ಉದಾಸೀನ ಮನೋಭಾವ, ಉತ್ತಮವಾಗಿ ಕಾರ್ಯ ನಿರ್ವಹಿಸದ ಕಾರಣದಿಂದ ಆ.30 ರಂದು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ ವಾರದ ನಂತರ ಪುನಃ ಕೆಲಸಕ್ಕೆ ಹಾಜರಾದವನು ಕಂಪೆನಿಯ ಮಾಹಿತಿಗಳನ್ನು ಕದ್ದು ಪರಾರಿಯಾಗಿದ್ದಾನೆ.
ತಿಂಗಳ ಸಂಬಳ ಪಡೆದು ಗಣೇಶ ಹಬ್ಬದ ರಜೆಕ್ಕೆಂದು ಹೋದವನು ನಂತರ ಕೆಲಸಕ್ಕೆ ಹಾಜರಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ, ಅಗತ್ಯ ಬಿದ್ದರೆ ಸೈಬರ್ ಕ್ರೈಂ ವಿಭಾಗದ ಸಹಾಯ ಪಡೆಯಲಾಗುವುದು ಎಂದು ಕೋರಮಂಗಲ ಠಾಣಾಧಿಕಾರಿ ನಾಗರಾಜ್ ತಿಳಿಸಿದರು.