ರೈಲ್ವೆ ನಿಲ್ದಾಣದಿಂದ ಮೆಜೆಸ್ಟಿಕ್ಗೆ ಉಚಿತ ಬಸ್ ಸೇವೆ
ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸರಕು, ಸರಂಜಾಮುಗಳನ್ನು ಸಾಗಿಸಲು ಪರದಾಡುತ್ತಿದ್ದ ಸಾವಿರಾರು ಪ್ರಯಾಣಿಕರು ಬಿಎಂಟಿಸಿಯ ಈ ಹೊಸ ಸೇವೆಯಿಂದ ಅನುಕೂಲವಾಗಲಿದೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಯಶವಂಪುರ ಬಸ್ ನಿಲ್ದಾಣಕ್ಕೂ ಇದೇ ರೀತಿಯ ಸೇವೆಯನ್ನು ಆರಂಭಿಸಲಾಗಿದೆ.
ಮಿನಿ ಬಸ್ ಸೇವೆಯನ್ನು ಉದ್ಘಾಟಿಸಿದ ಸಾರಿಗೆ ಸಚಿವ ಆರ್ ಅಶೋಕ್ ಮಾತನಾಡುತ್ತಾ, ಸಿಟಿ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಕೆಂಪೇಗೌಡಾ ಬಸ್ ನಿಲ್ದಾಣಕ್ಕೆ ಲಗೇಜು ಹಿಡಿದು ಬರಬೇಕಾದರೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಆಟೋ ರಿಕ್ಷಾಗಳಲ್ಲಿ ಬರಬೇಕಾದರೆ ರು.20 ಆಗುತ್ತದೆ. ಪ್ರಯಾಣಿಕರ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಾವು ಉಚಿತ ಸೇವೆಯನ್ನು ಪ್ರಾರಂಭಿಸಿದ್ದೇವೆ ಎಂದರು.
ಪ್ರತಿ ಹತ್ತು ನಿಮಿಷಕ್ಕೊಮ್ಮೆ ಈ ಮಿನಿ ಬಸ್ ಗಳು ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿರುತ್ತವೆ. ಈಗಾಗಲೆ ಈ ಸೇವೆಯನ್ನು 2,500ಕ್ಕೂ ಅಧಿಕ ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ. ಮುಂಜಾನೆ 4.30ರಿಂದ ರಾತ್ರಿ 11 ಗಂಟೆಯ ತನಕ ಈ ಮಿನಿ ಬಸ್ ಸೇವೆ ಲಭ್ಯ ಎಂದು ಆರ್ ಅಶೋಕ್ ತಿಳಿಸಿದರು. ಶಿವಾಜಿನಗರ ಬಸ್ ನಿಲ್ದಾಣದಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೂ ಈ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ.