ಮಳೆ ಆರ್ಭಟಕ್ಕೆ ಜನಜೀವನ ಅಯೋಮಯ

ಕೊಪ್ಪಳ, ಬಳ್ಳಾರಿ, ಗುಲ್ಬರ್ಗಾ, ಬೀದರ್, ರಾಯಚೂರು, ಗದಗ, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕಚ್ಚಿ ನಿಂತು ಹೊಡೆಯುತ್ತಿರುವ ಮಳೆ, ಗೂಡಿಗೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮಂತ್ರಾಲಯದ ದೈವಿಪುರುಷ ರಾಘವೇಂದ್ರನ ಸನ್ನಿಧಿಗೆ ಮತ್ತೆ ಪ್ರವಾಹದ ಬೀತಿ ಎದುರಾಗಿದೆ. ತುಳಸಿಕಟ್ಟೆಗೆ ಪ್ರವಾಹ ಬಡಿಯತೊಡಗಿದೆ. ಸ್ನಾನಘಟ್ಟ ಈಗಾಗಲೇ ಮುಳುಗಿ ಹೋಗಿದೆ. ಕಳೆದ ವರ್ಷ ಮಂಚಾಲಮ್ಮನ ದೇವಾಲಯ ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು ಗೊತ್ತಿರುವ ಸಂಗತಿಯಾಗಿದೆ.
ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಸುಮಾರು 500 ಮನೆಗಳು ಕುಸಿದು ಬಿದ್ದಿವೆ. ಹೊಸಪೇಟೆಯಲ್ಲಿ ಮಳೆ ಹೊಡೆತಕ್ಕೆ ಒಬ್ಬ ಬಲಿಯಾಗಿರುವ ವರದಿಯಾಗಿದೆ. ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಜನರಿಗೆ ಬೇರೆಡೆ ಸೂರು ಒದಗಿಸಲು ಆಯಾ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಗೆ ಧಾವಿಸಲು ಸಜ್ಜಾಗಿದೆ. ಕೆಲ ಜಿಲ್ಲೆಗಳಲ್ಲಿ ಗಂಜೀ ಕೇಂದ್ರಗಳನ್ನು ಸಹ ತೆರೆಯಲಾಗಿದೆ.
ಮಹಾರಾಷ್ಟ್ರದ ಲಾತೂರ್ ಹಾಗೂ ಉಸ್ಮಾನಾಬಾದ್ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಧನೇಗಾಂವ್ ಜಲಾಶಯದಿಂದಲೂ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಪ್ರವಾಹದ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ನದಿ ತೀರದಲ್ಲಿರುವ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಬೇರೆಡೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಮಳೆಯಿಂದಾಗಿ ಸಂಪರ್ಕಗಳು ಕಡಿದು ಹೋಗಿದ್ದು, ಕೈಗೆ ಬಂದ ಫಸಲು ನೆಲಕಚ್ಚಿದ್ದರಿಂದ ರೈತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ. ವ್ಯಾಪಕ ಹಾನಿ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬರೀ ಬಳ್ಳಾರಿ ಜಿಲ್ಲೆಯೊಂದರಲ್ಲೇ 460 ಹೆಕ್ಟೇರ್ ಪ್ರದೇಶಕ್ಕೆ ನೀರು ನುಗ್ಗಿದ್ದು, ಸುಮಾರು 3.8 ಕೋಟಿ ರುಪಾಯಿಗಳ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಮಳೆಯಿಂದಾಗಿ ಬುಧವಾರ ನಾಲ್ಕು ಮಂದಿ ಸಾವನ್ನಪ್ಪಿದ್ದರು, ಗುರುವಾರ ಇನ್ನೊಂದು ಸೇರ್ಪಡೆಯಾಗಿದೆ. ಒಟ್ಟಾರೆ, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.











Click it and Unblock the Notifications