ಸ್ವಯಂವರಕ್ಕೆ ಮೊರೆಹೋದ 55 ರ ಹಿರಿವಧು
ಮಕ್ಕಳಿಂದ ದೂರವಾಗಿ ಜೀವನ ನಡೆಸುತ್ತಿರುವ 55 ವರ್ಷದ ವಿಧವೆಯೊಬ್ಬರು, ಸ್ವಯಂವರ ನಡೆಸಿ ನೂತನ ಬಾಳಸಂಗಾತಿಯನ್ನು ಆರಿಸಿಕೊಂಡು ಸಂಭ್ರಮಪಟ್ಟ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಆನಂದ್ ಜಿಲ್ಲೆಯ ಭಾನುಮತಿ ಹೊಸ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿರಿಯ ವಧು.50ರ ಆಸುಪಾಸಿನ ಹರಯದ ರಾಜೇಂದ್ರ ರಾವಲ್ ಅವರು ಭಾನುಮತಿ ಅವರನ್ನು ವರಿಸಿದ್ದರು. ರಾಜೇಂದ್ರ ಗಾಂಧೀನಗರದ ಮನ್ಸಾದವರು. ತೀವ್ರ ಕುತೂಹಲ, ಅಚ್ಚರಿ ಮೂಡಿಸಿದ್ದ ಈ ಸ್ವಯಂವರದಲ್ಲಿ ಸುಮಾರು 36 ವರರು ಪಾಲ್ಗೊಂಡಿದ್ದರು.
ವಯಸ್ಸು 50 ದಾಟುತ್ತಿದ್ದಂತೆ ಜೀವನ ಕಳೆಯುವುದು ಕಷ್ಟ. ಸಮಾಜದಿಂದಾಗುವ ಕಷ್ಟ, ಕಾರ್ಪಣ್ಯಗಳಿಗೆ ಅವಕಾಶ ಮಾಡಿಕೊಡದಿರಲು ತಾನು ಈ ನಿರ್ಧಾರ ಕೈಗೊಂಡಿದ್ದಾಗಿ ಸ್ವಯಂವರದಲ್ಲಿ ವರನನ್ನು ಅಂತಿಮಗೊಳಿಸಿದ ನಂತರ ಭಾನುಮತಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಧವೆಯಾದ ತನಗೆ ಮತ್ತೊಂದು ಮದುವೆಯಾಗಿರುವುದು ಸಂತಸ ತಂದಿದೆ. ವೃದ್ಧಾಶ್ರಮಗಳಲ್ಲಿ ಬದುಕುವುದಕ್ಕಿಂತ ವಿವಾಹ ಜೀವನ ನಡೆಸುವುದು ನನಗೆ ಉತ್ತಮ ಎನಿಸಿದೆ. ತಮ್ಮದೇ ಹಾದಿಯನ್ನು ತಮ್ಮ ವಯಸ್ಸಿನ ಮಹಿಳೆಯರು ತುಳಿದರೆ ಅವರ ಜೀವನವೂ ಉತ್ತಮಗೊಳ್ಳುತ್ತದೆ ಎಂಬುದು ಭಾನುಮತಿ ನೀಡಿರುವ ಸಲಹೆ.
ವರ ರಾವಲ್ದು ಇದೇ ಅಭಿಪ್ರಾಯ. ಜೀವನದ ಕಟ್ಟಕಡೆಯ ದಿನಗಳನ್ನು ಸುಖಕರವಾಗಿ ಕಳೆಯಲು ತಾನು ಭಾನುಮತಿಯನ್ನು ವರಿಸಿದ್ದೇನೆಂಬುದು ಅವರು ವಿವಾಹಕ್ಕೆ ನೀಡಿರುವ ಕಾರಣ. ನಾಥುಬಾಯಿ ಪಟೇಲ್ ನೇತೃತ್ವದ ಎನ್ಜಿಒ ಸಂಸ್ಥೆ ಮುಲ್ಯಾ ಅಮೂಲ್ಯ ಸೇವಾ ಸಂಘಟನೆ ಈ ಸ್ವಯಂವರವನ್ನು ಆಯೋಜಸಿತ್ತು.
ಒಟ್ಟು 36 ಜನರು ಪಾಲ್ಗೊಂಡಿದ್ದ ಸ್ವಯಂವರದ ಮೊದಲ ಸುತ್ತಿಗೆ 10 ಜನರು ಆಯ್ಕೆಯಾಗಿದ್ದರು. ನಂತರ ಅಂತಿಮ ಸುತ್ತಿಗೆ ಮೂವರ ಆಯ್ಕೆಯಾಗಿದ್ದರು. ಅಂತಿಮವಾಗಿ ಭಾನುಮತಿ ರಾಜೇಂದ್ರ ರಾವಲ್ಗೆ ಮಾಲೆ ಹಾಕಿದ್ದಾರೆ.