ಗೌಡರ ಹುಡ್ಗ (20) ರೆಡ್ಡಿ ಹುಡ್ಗಿ (18) ಮದ್ವೆ ಗಲಾಟೆ
ಅನ್ಯ ಜಾತಿಗೆ ಸೇರಿದ ಹುಡುಗನೊಂದಿಗೆ ಮದುವೆ ಆಗುವುದನ್ನು ಹೆತ್ತವರು ವಿರೋಧಿಸುತ್ತಿದ್ದು, ನನ್ನನ್ನು ತೀವ್ರವಾಗಿ ಥಳಿಸಿದ್ದಾರೆ ಮತ್ತು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದಾರೆ ಎಂದು ಹದಿನೆಂಟು ವರ್ಷದ ಹಂಸಾ ಪೊಲೀಸರ ಎದಿರು ಅಲವತ್ತುಕೊಂಡಿದ್ದಾಳೆ.
ಹಂಸಾ ರೆಡ್ಡಿ ಕೋಮಿಗೆ ಸೇರಿದವಳಾಗಿದ್ದರೆ, ಇನ್ನೂ ಮದುವೆ ವಯಸ್ಸು ಮುಟ್ಟಿರದ ಅರುಣ್ ಕುಮಾರ್ (20) ಗೌಡ ಕೋಮಿಗೆ ಸೇರಿದವನಾಗಿದ್ದಾನೆ. ಧೈರ್ಯಸ್ಥ ಹುಡುಗಿ ಈ ವಿಷಯವನ್ನು ಐದು ತಿಂಗಳ ಹಿಂದೆಯೇ ತನ್ನ ಹೆತ್ತವರಿಗೆ ತಿಳಿಸಿದ್ದಾಳೆ. ಅಂದಿನಿಂದಲೇ ಹಂಸಾ ಮನೆ ರಣರಂಗವಾಗಿದೆ.
ಆದರೆ, ಅರುಣ್ ಅವರ ಕುಟುಂಬದವರು ಈ ಮದುವೆಯನ್ನು ವಿರೋಧಿಸುತ್ತಿಲ್ಲ. ಹಂಸಾಳನ್ನು ಮನೆಸೊಸೆಯಾಗಿ ಸ್ವೀಕರಿಸಲು ಅರುಣ್ ನ ತಾಯಿ ಜಯಮ್ಮ ಸಿದ್ಧರಿದ್ದಾರೆ. ಎರಡೂ ಕುಟುಂಬಗಳು ರಾಮಮೂರ್ತಿ ನಗರದಲ್ಲಿ ನೆರೆಹೊರೆಯವರಾಗಿ ವಾಸಿಸುತ್ತಿದ್ದಾರೆ.
ಪಾಲಕರ ಹೊಡೆತವನ್ನು ತಾಳಲಾರದೆ ಹಂಸಾ ಮನೆ ತೊರೆದು ಅರುಣ್ ಮನೆಗೆ ತೆರಳಿದ್ದಾಳೆ. ಅಲ್ಲಿಂದ ಹಂಸಾ, ಅರುಣ್ ಮತ್ತು ಆತನ ತಾಯಿ ಪೊಲೀಸರನ್ನು ರಕ್ಷಣೆಗಾಗಿ ಸಂಪರ್ಕಿಸಿದ್ದಾರೆ. ಪೊಲೀಸರು ಕೂಡ, ಈ ಸಂಬಂಧಕ್ಕೆ ಬೆಂಬಲ ಸೂಚಿಸಿದ್ದು, ಹುಡುಗ ಇನ್ನೂ ಮದುವೆ ವಯಸ್ಸು ತಲುಪದಿರುವ ಕಾರಣ ಮದುವೆ ಮಾಡಿಸದಿರಲು ನಿಶ್ಚಯಿಸಿದ್ದಾರೆ. ಎರಡು ಕುಟುಂಬದವರನ್ನು ಕರೆದು ಶಾಂತಿ ಸಂಧಾನ ನಡೆಸಲು ಕೂಡ ಪೊಲೀಸರು ಯೋಚಿಸುತ್ತಿದ್ದಾರೆ.