ಗಡಿಯಲ್ಲಿ ಕರವೇ ಹೊಗೆ ಹತ್ತಿಕ್ಕಿದ್ದ ಪೊಲೀಸರು

ನಗರದಿಂದ 40 ಕಿ.ಮೀ ದೂರದಲ್ಲಿರುವ ಪುಣಜನೂರು ಚೆಕ್ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಕಾರ್ಯಕರ್ತರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.
ಹೊಗೇನೆಕಲ್ ಜಲಪಾತ ಹಾಗೂ ಭೂ ಪ್ರದೇಶವನ್ನು ತಮಿಳುನಾಡು ಸರ್ಕಾರ ಆಕ್ರಮಿಸಿಕೊಂಡು ಕೋಟ್ಯಂತರ ರು. ವೆಚ್ಚದ ಕಾಮಗಾರಿಯನ್ನು ಆರಂಭಿಸಿದೆ. ಕೇಂದ್ರ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಹಿಂದಿನಿಂದಲೂ ಕರ್ನಾಟಕಕ್ಕೆ ತೀವ್ರ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.
ಈ ಕಾಮಗಾರಿ ಆರಂಭವಾಗಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೂ ಪ್ರಮುಖ ಕಾರಣ. ನಮ್ಮ ನೆಲ, ಜಲ ತಮಿಳರ ಪಾಲಾಗುತ್ತಿದ್ದರೂ ಕೈಕಟ್ಟಿ ಕುಳಿತಿರುವ ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಭಟನಾಕಾರರನ್ನು ತಡೆದ ಪೊಲೀಸರು ತಮಿಳುನಾಡು ಹಾಗೂ ಕರ್ನಾಟಕದ ಗಡಿಯನ್ನು ಗುರುತಿಸುವ ಕಾರೆಪಾಳ್ಯದ ಬಳಿ ರಸ್ತೆ ತಡೆ ನಡೆಸಿ, ಎರಡೂ ರಾಜ್ಯಗಳ ವಾಹನ ಸಂಚಾರ ಸ್ಥಗಿತಗೊಳಿಸಲು ಕರವೇ ಕಾರ್ಯಕರ್ತ ಹೊರಟಿದ್ದರು.
ಈ ಸಮಯದಲ್ಲಿ ಪುಣಜನೂರು ಚೆಕ್ಪೋಸ್ಟ್ ಬಳಿಯೇ ಇನ್ಸ್ಪೆಕ್ಟರ್ ಪ್ರತಾಪ್ರೆಡ್ಡಿ ನೇತೃತ್ವದ ರಾಜ್ಯ ಪೊಲೀಸರು ಕಾರ್ಯಕರ್ತರನ್ನು ತಡೆದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಕೆಲ ಸಮಯದ ನಂತರ ಬಿಡುಗಡೆಗೊಳಿಸಿದರು.












Click it and Unblock the Notifications