ಹಾಲಪ್ಪ ರಕ್ತ ಸಂಗ್ರಹಕ್ಕೆ ಕೋರ್ಟ್ ಅಸ್ತು
ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದರ್ಜೆ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ರವಿಕಾಂತ್ ಅವರು, ಡಿಎನ್ಎ ಪರೀಕ್ಷೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ರಕ್ತ ಮಾದರಿಯನ್ನು ಸಂಗ್ರಹಿಸಲು ಅನುಮತಿ ನೀಡಬೇಕೆಂದು ಸಿಐಡಿ ಪೊಲೀಸರು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ರಕ್ತದ ಮಾದರಿ ಸಂಗ್ರಹಿಸಲು ಅನುಮತಿ ನೀಡಿದೆ.
ಆದರೆ, ಹಾಲಪ್ಪ ಪರ ವಕೀಲ ಅಶೋಕ್ ಭಟ್ ನ್ಯಾಯಾಲಯದ ಅದೇಶವನ್ನು ಆಕ್ಷೇಪಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಕಕ್ಷಿದಾರ ಹಾಲಪ್ಪ ಅವರ ರಕ್ತ ಸಂಗ್ರಹಿಸುವುದು ಸರಿಯಲ್ಲ. ರಕ್ತ ಸಂಗ್ರಹಿಸಿಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಸದ್ಯ ಹೊರಡಿಸಿರುವ ಅದೇಶವನ್ನು 15 ರಿಂದ 1 ತಿಂಗಳ ಕಾಲ ಅಮಾನತ್ತಿನಲ್ಲಿ ಇಡಬೇಕು ಎಂದು ಭಟ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯೂ ಇಂದು ಸಂಜೆಯೇ ನಡೆಯುವ ಸಾಧ್ಯತೆ ಇದೆ.