ನಿಮ್ಮ ಕಂಪ್ಯೂಟರ್ ಬಾಗಿಲಲ್ಲಿ ಭಾಗ್ಯಲಕ್ಷ್ಮೀ

ಹೀಗೇ ಹಾರೈಸುವ ಒಂದು ಶುಭಾಶಯ ಪತ್ರ ನಮ್ಮ ಡಾಟ್ ಕಾಂ ಮನೆ ಬಾಗಿಲಿಗೆ ಸೋಮವಾರ ಬಂತು. ಬೇಡಾ ಎಂದಾರುಂಟೆ? ಶುಭಾಶಯ ಪತ್ರ ಮತ್ತು ಲಕ್ಷ್ಣೀ ದೇವಿಯ ಚಿತ್ರವನ್ನು ಕಳಿಸಿಕೊಟ್ಟವರು ಮಡಿಕೇರಿಯ ಇಂದ್ರೇಶ್. ಅಷ್ಟೇ ಅಲ್ಲ, ನಿಮ್ಮ ಸ್ನೇಹಿತರಿಗೂ ಲಕ್ಷ್ಮೀ ಭಾವಚಿತ್ರವನ್ನು ರವಾನಿಸಿ ಅವರಿಗೂ ಶುಭ ಹೇಳಿ ಎಂಬ ಭಕ್ತಿ ಪುರಸ್ಸರ ಆಗ್ರಹ ಅವರದ್ದು.
ಸಾಮಾನ್ಯವಾಗಿ ಇಂಥ ಹಾರೈಕೆಗಳನ್ನು ತಿಳಿಸುವ ಕರಪತ್ರಗಳು ಊರೂರುಗಳಲ್ಲಿ ಸಂಚರಿಸುತ್ತಲೇ ಇರುತ್ತವೆ. ಈ ಅಭ್ಯಾಸ ಈಗ ಇಂಟರ್ನೆಟ್ಟಿಗೂ ಪ್ರವೇಶವಾಗಿದ್ದು ಆಗಾಗ ನಮಗೆ ಇಂಥ ಹಾರೈಕೆಗಳು ಬರುತ್ತಲೇ ಇರುತ್ತವೆ. ಆದರೆ, ಇಂದ್ರೇಶ್ ಕಳಿಸಿರುವ ಹಾರೈಕೆಯಲ್ಲಿ ನಕಾರಾತ್ಮಕ ಧೋರಣೆಗಳಿಲ್ಲ. ' ಈ ಪತ್ರವನ್ನು ಹತ್ತೋ ಹನ್ನೆರಡೋ ಜನಕ್ಕೆ ಕಳಿಸಿದರೆ ನಿಮಗೆ ಒಳ್ಳೆಯದಾಗತ್ತೆ, ಇಲ್ಲದಿದ್ದರೆ ಬೇರೆ ಏನಾದರೊಂದು ಅನಾನುಕೂಲ ಆಗತ್ತೆ' ಎನ್ನುವ ಶಾಸನ ವಿಧಿಸದ ಎಚ್ಚರಿಕೆಯ ಮಾತುಗಳು, ಅಂದರೆ ಭಯ ಹುಟ್ಟಿಸುವ ಆಜ್ಞೆಗಳು ಇಲ್ಲಿಲ್ಲ.
ಅದು ನಮಗೆ ಇಷ್ಟವಾಯಿತು. ಆದ್ದರಿಂದ ಹತ್ತಲ್ಲ, ಹನ್ನೆರಡಲ್ಲ, ನೂರಲ್ಲ, ಸಹಸ್ರಾರು ಲಕ್ಷ ಕನ್ನಡ ಬಂಧುಗಳಿಗೆ ದೇವೀ ಕೃಪೆಯನ್ನು ಕನ್ನಡ ಅಂತರ್ಜಾಲ ತಾಣ ವತಿಯಿಂದ ರವಾನಿಸಿ ಶುಭಕೋರುವ ಹೆಮ್ಮೆ ನಮ್ಮದಾಯಿತು. ಬೆಲೆಗಳು ಏರುತ್ತಲೇ ಇವೆ. ಸಂಸಾರ ತೂಗಿಸುವುದು, ಮಾಸಿಕ ಬಿಲ್ಲುಗಳನ್ನು ಸಕಾಲಕ್ಕೆ ಪಾವತಿಸುವ ತೊಂದರೆಗಳ ಜತೆಗೆ ಸಂಬಳದಾರ ವರ್ಗಕ್ಕಂತೂ ಕಳೆದ ವರ್ಷದ ಆದಾಯ ತೆರಿಗೆ ಕಟ್ಟಿ ಕೈ ಸುಟ್ಟಿ ಕಪ್ಪಾಗಿದೆ. ಇದಲ್ಲದೆ ಮಕ್ಕಳನ್ನು ಶಾಲೆಗೆ ಭರ್ತಿ ಮಾಡಲು ಪ್ರವೇಶ ಶುಲ್ಕ ಮತ್ತು ಡೊನೇಷನ್ ಮುಂತಾದ ಖರ್ಚುವೆಚ್ಚಗಳಿಂದ ಜರ್ಝರಿತರಾದವರಿಗೆ ಲಕ್ಷ್ಣೀ ಭಾಗ್ಯಲಕ್ಷ್ಮೀ ಆಗಿ ಪರಿಣಮಿಸಲಿ ಎಂಬ ಆಶಾವಾದ ನಮ್ಮದು. ಇತಿ, ದಟ್ಸ್ ಕನ್ನಡ.












Click it and Unblock the Notifications