ಎಂಇಎಸ್ ಕ್ರಮ ಖಂಡಿಸಿ ಕರವೇ ಹೋರಾಟ
ಮೇಯರ್ ಆಯ್ಕೆ ಪ್ರಶ್ನಿಸಿ ಇಂದು ಬೆಂಗಳೂರಿಗೆ ಆಗಮಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಲ್ಲದೇ, ಬೆಳಗಾವಿ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಸಚಿವ ಸುರೇಶಕುಮಾರ್ ಅವರ ಮನೆ ಎದುರು ಪ್ರತಿಭಟನೆ ನಡೆಸಿದರು.ಒಂದು ಹಂತದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಸಚಿವದ್ವಯರ ಮನೆ ಮೇಲೂ ದಾಳಿ ನಡೆಸಿ ಕಿಟಿಕಿ ಗಾಜುಗಳನ್ನು ಪುಡಿ ಪುಡಿ ಮಾಡಿದರು. ಶಾಂತಿ ಕಾಪಾಡುವಂತೆ ಪೊಲೀಸರು ಮಾಡಿಕೊಂಡ ಮನವಿ ವಿಫಲವಾಗಿದ್ದರಿಂದ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 50 ಕಾರ್ಯಕರ್ತರನ್ನು ಬಂಧಿಸಲಾಯಿತು.
ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಾರಾಯಣಗೌಡ, ಸರಕಾರ ಎಂಇಎಸ್ ಕೈಗೊಂಬೆಯಾಗಿದೆ. ಕನ್ನಡಕ್ಕಾಗಿ ಹೋರಾಟ ನಡೆಸಿದ ಕಾರ್ಯಕರ್ತರನ್ನು ಜೈಲಿಗೆ ಹಾಕುವುದು ಎಲ್ಲಿಯ ನ್ಯಾಯ ? ಯಾವ ಕಾರಣಕ್ಕೆ ನಮ್ಮನ್ನು ಬಂಧಿಸಿಲಾಗಿದೆ. ಬೆಳಗಾವಿಯಲ್ಲಿ ಕನ್ನಡ ಮೇಯರ್ ಆಗಬೇಕು ಎಂದು ಕರವೇ ಕಾರ್ಯಕರ್ತರು ನಡೆಸಿದ ಹೋರಾಟ ತಪ್ಪೇ ಎಂದು ಅವರು ಕಿಡಿಕಾರಿದ್ದಾರೆ.
ಮಂಗಳವಾರ ನಡೆದ ಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ಕನ್ನಡಿಗ ನಿಂಗಪ್ಪ ನಿರ್ವಾಣಿ ಆಯ್ಕೆಯಾಗಿದ್ದರು. ಮೇಯರ್ ಸ್ಥಾನಕ್ಕೆ ಏಳು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಆರು ನಾಮಪತ್ರಗಳನ್ನು ತಿರಸ್ಕರಿಸಿದ ಚುನಾವಣೆ ಅಧಿಕಾರಿ ಯಲ್ಲಪ್ಪ ಕುರುಬರ ಅವರು ನಿಂಗಪ್ಪ ನಿರ್ವಾಣಿ ಅವರನ್ನು ಮೇಯರ್ ಎಂದು ಘೋಷಿಸಿದ್ದರು. ಇದನ್ನು ಎಂಇಎಸ್ ಕಾರ್ಯಕರ್ತರು ಅದರಲ್ಲಿ ಮಹಿಳಾ ಕಾರ್ಯಕರ್ತರು ಮೇಯರ್ ಕಡೆಗೆ ಚಪ್ಪಲಿ ತೋರಿಸಿ ಅವಮಾನ ಮಾಡಿದ್ದರು.
ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಗಾಳಿಗೆ ತೋರಿ ಮೇಯರ್ ಆಯ್ಕೆ ಮಾಡಲಾಗಿದೆ. ಆದ್ದರಿಂದ ಈ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕರವೇ ಪ್ರತಿಭಟನೆ ನಡೆಸಿದೆ.