ಪಾಕ್ ಹಿಂದೂಗಳ ಭಾವನೆಗೆ ಧಕ್ಕೆ
ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಿಗೆ ಅಲ್ಪಸಂಖ್ಯಾತ ಹಿಂದೂಗಳೇ ಕಾರಣ ಎಂದು ಲಾಹೋರ್ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಖ್ವಾಜಾ ಮೊಹಮ್ಮದ್ ಶರೀಫ್ ಅವರ ಹೇಳಿಕೆಗೆ ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತರ ಮುಖಂಡ ಹಾಗೂ ಪಾಕಿಸ್ತಾನಿ ಪೀಪಲ್ಸ್ ಪಾರ್ಟಿಯ ಸಂಸದ ರಮೇಶ್ ಲಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿರುವ 30 ಲಕ್ಷ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ಇದಾಗಿದ್ದು, ಈ ಬಗ್ಗೆ ಸರಕಾರ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿ ಸದನದಿಂದ ಹೊರನಡೆದಿದ್ದಾರೆ.
ತಾಲಿಬಾನ್ ಮುಖಂಡನ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ನ್ಯಾಯಮೂರ್ತಿ, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯಲ್ಲಿ ಹಿಂದೂಗಳ ಕೈವಾಡವಿದೆ. ಅಲ್ಲದೇ ಹಣಕಾಸಿನ ಸಹಾಯವನ್ನು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ನಾವು ಪಾಕಿಸ್ತಾನಕ್ಕೆ ದ್ರೋಹಕ್ಕೆ ಬಗೆಯುವ ಕೆಲಸಕ್ಕೆ ಎಂದೂ ಕೈಹಾಕುವುದಿಲ್ಲ. ಆದರೆ, ವಿನಾ ಕಾರಣ ಹಿಂದುಗಳ ಮೇಲೆ ಪದೆಪದೇ ಆರೋಪಗಳು ಕೇಳಿಬರುತ್ತಿವೆ ಎಂದು ರಮೇಶ್ ಲಾಲ್ ಅಸಮಾಧಾನ ವ್ಯಕ್ತಪಡಿಸಿದರು.