ಬಾಲ್ಯದ ನೆನಪಿನಾಳದಿಂದ ಒಂದು ಹನಿ

* ಚಿದಂಬರ ಬೈಕಂಪಾಡಿ, ಮಂಗಳೂರು
ದೇಶದ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ನವಮಂಗಳೂರು ಬಂದರು ಈಗ ಬೆಳೆದಿದೆ. ಹಚ್ಚಹಸುರಿನ ಗದ್ದೆ, ತೆಂಗಿನ ತೋಟಗಳಿಂದ ಕಂಗೊಳಿಸುತ್ತಿದ್ದ ಪಣಂಬೂರು ಈಗ ಬಂದರು ನಗರಿ. ಹಸಿರು ಮಾಯವಾಗಿದೆ, ಎಲ್ಲಿ ನೋಡಿದರೂ ಧೂಳು.. ಧೂಳು. ಬಳ್ಳಾರಿಯ ಗಣಿ ಧೂಳು ನವಮಂಗಳೂರು ಬಂದರು ನಗರವನ್ನು ಆವರಿಸಿಕೊಂಡಿದೆ. ಇಲ್ಲಿನ ರಸ್ತೆಗೆ ಕಾಲಿಟ್ಟರೆ ಸಾಕು ಧೂಳಿನಿಂದ ಧರಿಸಿದ ಬಟ್ಟೆಗಳು ಬಣ್ಣ ಕಳೆದುಕೊಳ್ಳುತ್ತವೆ. ನಿಜಕ್ಕೂ ಹೀಗಾಗುವುದೆಂದು ಯಾರೂ ಭಾವಿಸಿರಲಿಲ್ಲ.
ಆದರೆ ಸುಮಾರು 1962ನೇ ಇಸವಿಯನ್ನು ನೆನಪಿಸಿಕೊಂಡರೆ ಕಣ್ಣಿಗೆ ಕಟ್ಟುವುದು ಭತ್ತದ ಗದ್ದೆಗಳು, ತೆಂಗಿನ ತೋಟ. ನವಮಂಗಳೂರು ಬಂದರು ನಿರ್ಮಾಣ ಆರಂಭವಾಗುತ್ತಿದ್ದಂತೆಯೇ ಹಚ್ಚ ಹಸಿರು ಮಾಯವಾಯಿತು, ಕಾಂಕ್ರೀಟ್ ಕಾಡುಗಳು ಬೆಳೆದು ನಿಂತವು. 1975ರ ಜನವರಿ 11ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತೆರೆದ ಜೀಪಿನಲ್ಲಿ ಬಂದರು ಉದ್ಘಾಟನೆಗೆ ಬಂದಾಗ ನಾನು ಹೈಸ್ಕೂಲ್ ವಿದ್ಯಾರ್ಥಿ. ಈಗಲೂ ಚೆನ್ನಾಗಿ ನೆನಪಿವೆ ಆದಿನಗಳು.
ಬೈಕಂಪಾಡಿ ಮೀನುಗಾರಿಕೆ ಹೈಸ್ಕೂಲ್ನಲ್ಲಿ ಓದುತ್ತಿದ್ದೆ. ಇಂದಿರಾ ಗಾಂಧಿ ಅವರನ್ನು ಹತ್ತಿರದಿಂದ ಕಾಣಲು ಅವಕಾಶವಿದೆ ಎನ್ನುವುದು ಗೊತ್ತಾಗಿ ಗೆಳೆಯರ ದಂಡುಕಟ್ಟಿಕೊಂಡು ಮಟ ಮಟ ಮಧ್ಯಾಹ್ನ ಉದ್ಘಾಟನೆ ನಡೆಯಲಿದ್ದ ಸ್ಥಳಕ್ಕೆ ಹೋದೆವು. ಖಾಕಿ ಚೆಡ್ಡಿ, ಬಿಳಿ ಅಂಗಿ(ಶಾಲೆಯ ಯೂನಿಫಾರಂ)ಗೆ ಗಂಜಿ ನೀರು ಹಾಕಿ ಇಸ್ತ್ರಿಹಾಕಿದ್ದೆ. ಆಗ ಎಲ್ಲಿ ನೋಡಿದರೂ ಬುಗರಿ ಹಣ್ಣಿನ ಗಿಡಗಳು. ನಮಗೆ ಬೇಕಾದಷ್ಟು ಹಣ್ಣು ಕಿತ್ತು ಅಂಗಿ, ಚೆಡ್ಡಿ ಕಿಸೆಗಳಿಗೆ ತುಂಬಿಸಿಕೊಂಡೆವು. ಬಿಸಿಲನ್ನೂ ಲೆಕ್ಕಿಸದೆ ಬುಗರಿ ಹಣ್ಣು ತಿನ್ನುತ್ತಾ ಉದ್ಘಾಟನೆ ಸ್ಥಳಕ್ಕೆ ಹೋದಾಗ ದೊಡ್ಡ ಪೆಂಡಾಲ್ ಹಾಕಿ ಸಾಲಾಗಿ ಕುರ್ಚಿಗಳನ್ನು ಜೋಡಿಸಿದ್ದರು. ಖಾಲಿ ಕುರ್ಚಿಗಳಿದ್ದ ಕಾರಣ ಬುಗರಿ ಹಣ್ಣು ತಿನ್ನುತ್ತಾ ಕುಳಿತೆವು. ನಾಲ್ಕು ಮಂದಿ ಕುರ್ಚಿಯಲ್ಲಿ ಕುಳಿತಿದ್ದುದನ್ನು ನೋಡಿದ ದೊಡ್ಡ ಮನುಷ್ಯರು (ಹೆಸರು ಗೊತ್ತಿಲ್ಲ) ಓಡಿಸಿಕೊಂಡು ಬಂದು ಸ್ಟೇಜಿನ ಮುಂದೆ ಹಾಸಿದ್ದ ಜಮಖಾನದ ಮೇಲೆ ಕುಳ್ಳಿರಿಸಿ ಮಿಸುಕಾಡಬಾರದು ಅಂತ ತಾಕೀತು ಮಾಡಿದರು. ಕಿಸೆಯಲ್ಲಿದ್ದ ಬುಗುರಿ ಹಣ್ಣು ಖಾಲಿಯಾದವು, ಒಂದಷ್ಟು ಜನ ಬಂದು ಪೆಂಡಾಲ್ ಸೇರಿದರು, ಇಂದಿರಾ ಗಾಂಧಿಯವರು ಮಾತ್ರ ಬರಲೇ ಇಲ್ಲ.
ಮಧ್ಯಾಹ್ನದ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆಯೇ ಪಂಡಿತಾರಾಧ್ಯ (ಬಂದರಿನ ಆಗಿನ ಚೀಫ್ ಇಂಜಿನಿಯರ್) ಸ್ಟೇಜ್ ಹತ್ತಿದರು. ತುಸು ಹೊತ್ತಲ್ಲಿ ಸಾಲುಗಟ್ಟಿ ಕಾರುಗಳು ಬಂದವು. ಅದರಲ್ಲಿ ಇಂದಿರಾ ಗಾಂಧಿ ಇದ್ದರು. ಕಾರಿನಿಂದ ಇಳಿದ ಇಂದಿರಾಗಾಂಧಿ ನೇರವಾಗಿ ತೆರೆದ ಜೀಪು ಹತ್ತಿದರು. ಬಂದರನ್ನು ಸುತ್ತಾಡಿದರು ಮತ್ತು ಹೆದ್ದಾರಿಯ ಮತ್ತೊಂದು ಪಕ್ಕದಲ್ಲಿರುವ ಎಂಸಿಎಫ್ (ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ) ಉದ್ಘಾಟಿಸಿ ಬಂದರು.
ದೊಡ್ಡ ಪೆಂಡಾಲ್ ಜನರಿಂದ ತುಂಬಿ ಹೋಯಿತು. ಸ್ಟೇಜಿನ ಮುಂಭಾಗದಲ್ಲಿ ಗೋಣು ಎತ್ತರಿಸಿಕೊಂಡೇ ಕುಳಿತಿರಬೇಕಾಯಿತು. ವೀರೇಂದ್ರ ಪಾಟೀಲ್, ದೇವರಾಜ ಅರಸು, ಕಮಲಾಪತಿ ತ್ರಿಪಾಠಿ ಮುಂತಾದವರಿದ್ದ ನೆನಪು. ವೇದಿಕೆಯಲ್ಲಿದ್ದವರೆಲ್ಲಾ ಭಾಷಣ ಮಾಡಿದರು.ಇಂದಿರಾ ಗಾಂಧಿಯವರು ಭಾಷಣಕ್ಕೆ ಎದ್ದು ನಿಂತಾಗ ಪಿನ್ಡ್ರಾಪ್ ಸೈಲೆನ್ಸ್. ಕಂಚಿನ ಕಂಠದಲ್ಲಿ ಹಿಂದಿಯಲ್ಲಿ, ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು. ಅವರು ಹೇಳಿದ ಮಾತುಗಳ ಪೈಕಿ ಈಗಲೂ ನೆನಪಿರುವುದು ಇಷ್ಟು : ಕರ್ನಾಟಕದ ಹೆಬ್ಬಾಗಿಲು ಈ ಬಂದರು. ಈ ಮೂಲಕ ಇಲ್ಲಿ ಕೈಗಾರಿಕೆ ಕ್ರಾಂತಿ ಆಗಲಿದೆ. ಭಾರತದ ಭೂಪಟದಲ್ಲಿ ಮಂಗಳೂರು ಖಾಯಂ ಸ್ಥಾನ ಪಡೆಯಲಿದೆ.
ನಿಜ ಇಂದಿರಾ ಗಾಂಧಿಯವರು ಹೇಳಿದು ಸತ್ಯ. ಈಗ ಮಂಗಳೂರು ಜಗತ್ತಿನ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಒಂದಷ್ಟು ಭಾರೀ ಕೈಗಾರಿಕೆಗಳು ಬಂದಿವೆ, ಬೇಡವೆಂದರೂ ಬರುತ್ತಿವೆ. ಪರಿಸರ, ಜೀವ ಸಂಕುಲ, ಹಸಿರು ವನಸಿರಿ ನಾಶವಾಗುವಷ್ಟರ ಮಟ್ಟಿಗೆ ಕೈಗಾರಿಕೆಗಳು ಬೇರೂರುತ್ತಿವೆ.
ಈಗ ಭತ್ತದ ಗದ್ದೆಗಳಿಲ್ಲ, ತೆಂಗಿನ ತೋಟಗಳಿಲ್ಲ, ಕಿಸೆತುಂಬಾ ತುಂಬಿಸಿಕೊಂಡು ತಿನ್ನುತ್ತಿದ್ದ ಬುಗರಿ ಹಣ್ಣಿಲ್ಲ, ಗಿಡಗಳೂ ಇಲ್ಲ. ಬಿಸಿಲಿ ಝಳ ನೀಗಿಸಿಕೊಳ್ಳಲು ಈಜಾಡಿ ಸ್ನಾನ ಮಾಡುತ್ತಿದ್ದ ಬೈಲರೆಗಳು (ಸಣ್ಣ ಸಣ್ಣ ಕೆರೆ) ಇಲ್ಲ. ಕಳೆದುಹೋದ ದಿನಗಳು ಮತ್ತೆ ಬರುವುದಿಲ್ಲ ನಿಜ, ಹಾಗೆಯೇ ಕಳೆದುಕೊಂಡ ಗದ್ದೆ, ಬಯಲು, ತೋಟ, ಕೆರೆಗಳೂ ಮತ್ತೆ ಕಾಣಸಿಗವು. ನಮಗೆ ನೆನಪಾದರೂ ಉಳಿದಿವೆ, ನಮ್ಮ ಮಕ್ಕಳಿಗೆ ಅದೂ ಗೊತ್ತಿಲ್ಲ ಎನ್ನುವುದೇ ಬೇಸರ. ಮಕ್ಕಳೇ ನಮ್ಮನ್ನು ಕ್ಷಮಿಸಿ ಬಿಡಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications