ಹೆಬ್ರಿ ಎನ್ ಕೌಂಟರಿಗೆ ನಕ್ಸಲ್ ವಸಂತ್ ಬಲಿ
ಹೆಬ್ರಿ, ಮಾ.2: ನಕ್ಸಲ್ ಪೀಡಿತ ಪ್ರದೇಶವಾದ ಅಜೆಕಾರು ಠಾಣಾ ವ್ಯಾಪ್ತಿಯ ಮುನಿಯಾಲಿನ ಮುಟ್ಲುಪಾಡಿ ಬಳಿ ಸೋಮವಾರ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ದಳದ ಜಂಟಿ ಕಾರ್ಯಾಚರಣೆ ವೇಳೆಯ ಮುಖಾಮುಖಿಯಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ವಸಂತ ಅಲಿಯಾಸ್ ಆನಂದ (35) ಎಂಬುವವನು ಹತನಾಗಿದ್ದಾನೆ. ಇದೇ ವೇಳೆ ನಕ್ಸಲ್ ಗುಂಡಿನಿಂದ ಪೊಲೀಸ್ ಒಬ್ಬರಿಗೆ ಗಾಯಗಳಾಗಿವೆ. ಜಾತ್ರೆ ಸಮಯದಲ್ಲೇ ಎನ್ಕೌಂಟರ್ ನಡೆದಿದ್ದು, ಮುಟ್ಲುಪಾಡಿಯ ಶ್ರೀ ಅರ್ಧನಾರೀಶ್ವರ ದೇವಳದಲ್ಲಿ ಸೋಮವಾರ ಜಾತ್ರಾ ಸಂದರ್ಭದಲ್ಲಿ ಕುಕೃತ್ಯ ನಡೆಸಲು ಹೊಂಚಿ ಹಾಕಿದ ಶಂಕೆ ವ್ಯಕ್ತವಾಗಿದೆ.
ಕೂಬಿಂಗ್ ಕಾರ್ಯಾಚರಣೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ರಾಜೇಶ್ ಎಂಬವರ ಭುಜಕ್ಕೆ ಗುಂಡು ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹತನಾದ ವಸಂತನ ಜೊತೆ ನಕ್ಸಲ್ ಪ್ರಮುಖರಾದ ವಿಕ್ರಮ್ ಗೌಡ,ಸುಂದರಿ ಸೇರಿದಂತೆ 8ಜನ ಸಂಚರಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭ ಅಲ್ಲಿಗೆ ತೆರಳಿದ್ದ ನಕ್ಸಲ್ ನಿಗ್ರಹ ಪಡೆಯ ಮೇಲೆ ನಕ್ಸಲರು ಏಕಾಏಕಿಯಾಗಿ ಗುಂಡು ಹಾರಿಸಲು ಆರಂಭಿಸಿದರು.ಪ್ರತಿಯಾಗಿ ಗುಂಡು ಹಾರಿಸಿದಾಗ ಆನಂದ ಗಾಯಗೊಂಡು ಮೃತಪಟ್ಟನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಎನ್ಕೌಂಟರ್ನಲ್ಲಿ 16 ಮಂದಿ ನಕ್ಸಲ್ ನಿಗ್ರಹ ಪಡೆಯ ತಂಡ ಪಾಲ್ಗೊಂಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠ ಪ್ರವೀಣ್ ಮಧುಕರ ಪೊವಾರ್, ಎ.ಎನ್.ಎಫ್ ಎಸ್ಪಿ ವಾಸುದೇವ ಮೂರ್ತಿ, ಡಿವೈಎಸ್ಪಿ ಸಂತೋಷ್ ಕುಮಾರ್, ಕಾರ್ಕಳ ಠಾಣಾಧಿಕಾರಿ ರಾಮಚಂದ್ರ ನಾಯಕ್ ಹೆಬ್ರಿ ಠಾಣಾಧಿಕಾರಿ ಸುರೇಶ್ ಕುಮಾರ್ ಮೊದಲಾದವರು ಸ್ಥಳದಲ್ಲಿದ್ದು ಕ್ರಮಕೈಗೊಂಡಿದ್ದಾರೆ. ಎನ್ಕೌಂಟರ್ ನಡೆದ ಸ್ಥಳ ದಟ್ಟವಾದ ಅರಣ್ಯ ಪ್ರದೇಶವಾಗಿದ್ದು ಮೊಬೈಲ್ ಸಂಪರ್ಕ ಕೂಡ ಸಾಧ್ಯವಾಗುತ್ತಿರಲಿಲ್ಲ.
ಹತನಾದ ವಸಂತ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಗ್ರಾಮದವನು. ಈತನ ತಂದೆ ಕೋಟಂದಡ್ಕ ನಿವಾಸಿ ಬಾಬು ಮಲೆಕುಡಿಯ. ಅನಕ್ಷರಸ್ಥನಾಗಿದ್ದ ವಸಂತ ಸುಮಾರು 10 ವರ್ಷಗಳ ಹಿಂದೆ ಕರ್ನಾಟಕ ಮೋಚನಾ ರಂಗದ ಮುಖಾಂತರ ಕುದುರೆಮುಖ ರಕ್ಷಿತಾರಣ್ಯದೊಳಗಿರುವವರನ್ನು ಒಕ್ಕಲೆಬ್ಬಿಸುವ ವಿರುದ್ಧ ಹೋರಾಟದ ನೆಪದಲ್ಲಿ ಗುರುತಿಸಿಕೊಂಡಿದ್ದ. ಈದು ಎನ್ ಕೌಂಟರ್ ಆದಾಗ ಪರಾರಿಯಾದ ನಕ್ಸಲ್ ಗುಂಪಿನಲ್ಲಿದ್ದ. ಈ ಹಿಂದೆ ಶೃಂಗೇರಿಯಲ್ಲಿ ಹತನಾಗಿದ್ದ ದಿನಕರನ ನೆರೆಮನೆಯಾತನೇ ವಸಂತ. ಈತ ಸಾಕೇತ ರಾಜನೊಂದಿಗೆ ನಂಟಿರಿಸಿಕೊಂಡಿದ್ದ ಎನ್ನಲಾಗಿದೆ.












Click it and Unblock the Notifications