ಎಲೆ ಮರೆಯ ಕೋಗಿಲೆ ಶಂಕರ್
ಎಂಟನೆ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಶಂಕರ್ ಬಾಬು ಪ್ರಾಣಿ ಪಕ್ಷಿಗಳ ಧ್ವನಿಯನ್ನ ಏಕಾಗ್ರತೆಯಿಂದ ಆಲಿಸಿ ಅನುಕರಣೆ ಮಾಡಿ ಎಲ್ಲಾ ಪ್ರಾಣಿ ಪಕ್ಷಿಗಳ ಧ್ವನಿಯನ್ನ ನಿಮಗೆ ಕೇಳಿಸುತ್ತಾರೆ. ಮೋಟಾರ್ಬೈಕ್ಗಳ ಮತ್ತು ವಾಹನಗಳ ಧ್ವನಿಯನ್ನು ಅನುಕರಣೆ ಮಾಡುವುದರಲ್ಲಿ ಅವರು ಎತ್ತಿದ ಕೈ. ಕೋಗಿಲೆ, ಗೊರವಂಕ, ಅಳಿಲು, ಗಿಡುಗ, ಹಸು, ಮರಕುಟಿಗಳ ಧ್ವನಿಗಳನ್ನು ಯಥಾವತ್ತಾಗಿ ಅನುಕರಿಸುತ್ತಾರೆ ಬಾಬು.
ನಾನಿನ್ನ ಮರೆಯಲಾರೆ ಚಿತ್ರದಲ್ಲಿ ಡಾ.ರಾಜಣ್ಣನವರ ಬೈಕ್ ಮತ್ತು ಟ್ರೈನ್ ಚೇಸಿಂಗ್ ಶಬ್ಧ, ಆಂಬುಲೆನ್ಸ್ ಸೈರನ್, ಫೋನ್ನ ಟ್ರಿಣ್..ಟ್ರಿಣ್.. ಯಮಹಾ ಆರ್.ಎಕ್ಸ್ ಬೈಕ್ನ ಶಬ್ಧ ಮತ್ತಿತರ ಧ್ವನಿಗಳನ್ನ ಯಥಾವತ್ತಾಗಿ ಅನುಕರಣೆ ಮಾಡುತ್ತಾರೆ ಶಂಕರ್. ಬಾಯಲ್ಲಿ ಬೆರಳಿಟ್ಟು ಶಿಳ್ಳೆ ಹೊಡೆಯುವ ರೀತಿಯಲ್ಲಿ ಧ್ವನಿ ಅನುಕರಣೆ ಮಾಡುವ ಶಂಕರ್ಬಾಬು ನೀವು ಏನು ಕೇಳ್ತೀರೋ ಆ ಧ್ವನಿಗಳನ್ನ ಅನುಕರಿಸಬಲ್ಲರು.
ಅನುಕರಿಸುವ ವಿದ್ಯೆಯನ್ನು ಅವರು ಅಷ್ಟಕ್ಕೇ ನಿಲ್ಲಿಸಿಲ್ಲ. ಹೊಸ ಹೊಸ ವ್ಯಕ್ತಿಗಳು, ಸಂಗೀತ ವಾದ್ಯಗಳ ಧ್ವನಿ ಅನುಕರಣೆ ಮಾಡುವ ಅಭ್ಯಾಸ ಮುಂದುವರೆಸುತ್ತಿದ್ದಾರೆ ಶಂಕರ್. ಓದಿದ್ದು ಕಮ್ಮಿ ಎಂಬ ಕೀಳರಿಮೆ ಇತ್ತು ಆದರೆ ಈಗ ಆ ಕೀಳರಿಮೆ ಹೋಗಿ ಹೊಸ ಆತ್ಮಸ್ಥೈರ್ಯ ಬಂದಿದೆ ಎನ್ನುತ್ತಾರೆ ಬಾಬು.
ಶಾಲೆಗೆ ಹೋಗಿ ಓದಿ ದೊಡ್ಡವನಾಗಲಿ ಎಂಬ ಆಸೆಯನ್ನು ಶಂಕರನ ಪೋಷಕರು ಇಟ್ಟುಕೊಂಡಿದ್ದರು. ಆದರೆ ಬಾಬುಗೆ ಶಿಷ್ಟ ವಿದ್ಯೆ ನೈವೇದ್ಯ ಆಯಿತು. ಶಾಲೆಗೆ ಕಳುಹಿಸಿದರೆ ಮರ ಗಿಡದ ಕೆಳಗೆ ಕುಳಿತು ಹಕ್ಕಿಪಕ್ಷಿಗಳ ಚಿಲಿಪಿಲಿ ಕಲರವವನ್ನ ಕೇಳುವುದು ಹಾದಿಯಲ್ಲಿ ಸಾಗುವ ವಾಹನಗಳ ಶಬ್ಧವನ್ನ ಅನುಕರಣೆ ಮಾಡುವುದನ್ನ ಕರಗತ ಮಾಡಿಕೊಂಡ ಬಾಬು.
ಶಂಕರ್ಬಾಬುವಿಗೆ ಮಿಮಿಕ್ರಿ ಮಾಡಲು ಯಾರ ಸ್ಪೂರ್ತಿಯೂ ಇಲ್ಲ, ಗುರುವೂ ಇಲ್ಲ, ಪರಿಸರವನ್ನೇ ಗುರುವಾಗಿಸಿಕೊಂಡು ಏಕಲವ್ಯನಂತೆ ಅನುಕರಣೆ ಮಾಡುವುದನ್ನು ಅವರು ಕಲಿತರು. ಮಗ ಓದಲಿಲ್ಲ ಎಂಬ ಕೊರಗು ಪೋಷಕರನ್ನ ಕಾಡುತ್ತಿತ್ತು, ಆದರೆ ವಿಶೇಷವಾದ ಕಲೆ ತಮ್ಮ ಮಗನಲ್ಲಿ ಅಡಗಿದೆ ಎಂಬ ಸ್ಪಲ್ಪ ಸಮಾಧಾನವಿದೆ ಎಂದು ಶಂಕರ್ಬಾಬುವಿನ ತಂದೆ ತಮ್ಮಣ್ಣ ಹೇಳುತ್ತಾರೆ.
ಪ್ರತಿಭೆ ಇದ್ದೂ ಪ್ರೋತ್ಸಾಹ ಇಲ್ಲದವರನ್ನು ಮತ್ತು ಸುದ್ದಿ ಬೆಳಕಿಗೆ ಬರಲೊಲ್ಲದವರನ್ನು ಎಲೆ ಮರೆಯ ಕಾಯಿ ಎಂದು ಬಣ್ಣಿಸುವುದುಂಟು. ಆದರೆ ನಮ್ಮ ಶಂಕರ್ ಮಾತ್ರ ಎಲೆ ಮರೆಯ ಕೋಗಿಲೆ ಎನ್ನುವುದರಲ್ಲಿ ಸಂಶಯವೇ ಇಲ್ಲ.