ಗಣಿಗಾರಿಕೆ ತನಿಖೆ ಸಿಬಿಐಗೆ ವಹಿಸಿದ ಆಂಧ್ರ

ಆಂಧ್ರದ ಪ್ರಮುಖ ಪ್ರತಿಪಕ್ಷಗಳಾದ ಟಿಡಿಪಿ,ಸಿಪಿಐ, ಸಿಪಿಐ(ಎಂ) ಹಾಗೂ ಲೋಕ್ ಸತ್ತಾ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ನ ಹಿರಿಯ ನಾಯಕರಾದ ವಿ ಹನುಮಂತರಾವ್ ಅವರು ರೆಡ್ಡಿ ಸೋದರರ ಗಣಿಗಾರಿಕೆ ಹಾಗೂ ಅನಂತಪುರದಲ್ಲಿ ನಡೆದಿದೆ ಎನ್ನಲಾದ ಗಣಿಗಾರಿಕೆ ಅಕ್ರಮವನ್ನು ಸರಿಪಡಿಸಬೇಕು. ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಪಡಿಸಿದ್ದರು. ಈ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ರೋಶಯ್ಯ ಅವರು ಅನಂತಪುರ ಜಿಲ್ಲೆಯ ಗಣಿಗಾರಿಕೆಯಲ್ಲಿನ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಹೇಳಿದರು.
ಈ ಮುಂಚೆ ಓಬಳಾಪುರಂ ಗಣಿಗಾರಿಕೆ ನಿಲ್ಲಿಸುವಂತೆ ಸ್ಥಳೀಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಆಗಿನ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಸರ್ಕಾರ ತನಿಖೆ ನಡೆಸಿ ಎಲ್ಲವೂ ಸಕ್ರಮವಾಗಿದೆ ಎಂದು ಪ್ರಕಟಿಸಿತ್ತು.
ಸಿಬಿಐ ತನಿಖೆಗೆ ಸಿದ್ಧ: ರೆಡ್ಡಿ
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ ಅವರು ಇದು ವೈಯಕ್ತಿಕ ದ್ವೇಷದಿಂದ ಕೈಗೊಂಡ ಕ್ರಮ. ಓಬಳಾಪುರಂ ಗಣಿಗಾರಿಕೆಯಲ್ಲಿ ಯಾವುದೇ ರೀತಿಯ ಲೋಪ ದೋಷಗಳು ನಡೆದಿಲ್ಲ. ಇದರಲ್ಲಿ ಸಂಶಯವಿದ್ದರೆ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಲಿ. ಆಂಧ್ರಪ್ರದೇಶದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರ ಅಕಾಲಿಕ ಸಾವಿನ ಲಾಭ ಪಡೆಯಲು ಎಲ್ಲಾ ಪಕ್ಷಗಳು ಹವಣಿಸುತ್ತಿದೆ. ಸಿಬಿಐಗೆ ಒಪ್ಪಿಸಲು ಮುಂದಾಗಿರುವುದು ಕೂಡ ಈ ಹವಣಿಕೆಯ ಫಲ. ನಾವು ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಗಣಿಗಾರಿಕೆ ರಾಜ್ಯಕ್ಕೆ ಸೀಮಿತವಾದ ವಿಷಯವಲ್ಲ. ಕೇಂದ್ರ ಸರ್ಕಾರದ ಕಣ್ತಪ್ಪಿಸಿ ದ್ರೋಹ ಮಾಡುವುದು ಸಾಧ್ಯವೇ.
ಚಂದ್ರಬಾಬು ನಾಯ್ಡು ಒಬ್ಬ ನಿರುದ್ಯೋಗಿ ರಾಜಕಾರಣಿ, 2006 ರಲ್ಲೇ ಸಿಬಿಐ ತನಿಖೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದೆ. ಆಂಧ್ರ ಸಿಎಂ ಅವರು ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿದ್ದಾರೆ. ಕೇಂದ್ರ ತಂಡದಿಂದ ಈಗಾಗಲೇ ನಮ್ಮ ಗಣಿಗಾರಿಕೆ ಪ್ರದೇಶದ ಸರ್ವೆ ನಡೆದಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿಯನ್ನು ಸಲ್ಲಿಸಲಾಗಿದೆ. ಇಷ್ಟಕ್ಕೂ ಸಿಬಿಐ ತನಿಖೆ ನಡೆದರೆ ನಾವು ಸ್ವಾಗತಿಸುತ್ತೇವೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications