ಸರಕಾರಿ ನೌಕರರ ಡಿಎ ಸಂತ್ರಸ್ಥರಿಗೆ : ಸಿಎಂ
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂತ್ರಸ್ಥರ ನೆರವಿಗೆ ಸರಕಾರ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಮುಖ್ಯವಾಗಿ 2009-10ರ ಸಾಲಿನ ಯೋಜನಾಯೇತರ ವೆಚ್ಚಗಳಲ್ಲಿ ಶೇ. 10 ರಷ್ಟು ಕಡಿತಗೊಳಿಸಿದೆ. ಸರಕಾರಿ ನೌಕರರ ನಾಲ್ಕು ತಿಂಗಳು ಅಂದರೆ ಜುಲೈನಿಂದ ಅಕ್ಟೋಬರ್ ವರೆಗಿನ ತುಟ್ಟಿಭತ್ಯೆ ಸುಮಾರು 190 ಕೋಟಿ ರುಪಾಯಿಗಳನ್ನು ನೆರೆ ಸಂತ್ರಸ್ಥರಿಗೆ ನೀಡಲು ಸರಕಾರಿ ನೌಕರರು ಒಪ್ಪಿಕೊಂಡಿದ್ದಾರೆ.
ಅಲ್ಲದೇ, ನೆರೆ ಸಂತ್ರಸ್ಥರ ಪರಿಹಾರ ಕಾರ್ಯ ಸಂಪೂರ್ಣವಾಗಿ ಮುಗಿಯುವವರೆಗೂ ಸರಕಾರಿ ನೇಮಕಾತಿಗಳನ್ನು ಮಾಡಿಕೊಳ್ಳದಿರಲು ಸರಕಾರ ಕೈಗೊಂಡು ನಿರ್ಧಾರಗಳಲ್ಲಿ ಪ್ರಮುಖವಾಗಿದೆ. ಅಲ್ಲದೇ, ವಿವಿಧ ಇಲಾಖೆಗೆ ನೂತನ ವಾಹನಗಳ ಖರೀದಿ ಮಾಡುವುದು, ಅನಗತ್ಯ ಖರ್ಚು ಮಾಡುವುದನ್ನು ಸಂಪೂರ್ಣವಾಗಿ ಕಡಿತ ಮಾಡಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ. ಜೊತೆಗೆ ಅಧ್ಯಯನ ಹೆಸರಿನಲ್ಲಿ ವಿದೇಶ ಹಾಗೂ ಸ್ವದೇಶ ಪ್ರಯಾಣ ಮಾಡುವುದನ್ನು ನಿಲ್ಲಿಸಬೇಕು. ಅವಶ್ಯಕತೆ ಇದ್ದರೆ ಎಕನಾಮಿ ಕ್ಲಾಸ್ ನಲ್ಲಿ ಪ್ರಯಾಣಿಸಬೇಕು ಎಂದು ಯಡಿಯೂರಪ್ಪ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)