ಬೆಂಗಳೂರು ಅಭಿವೃದ್ಧಿಗೆ 22000 ಕೋ. ರು

ವಿಧಾನಸೌಧದ ಸಮಿತಿಯ ಕೊಠಡಿಯಲ್ಲಿ ಇಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವರು "ನಮ್ಮ ಬೆಂಗಳೂರು - ನಮ್ಮ ಧ್ಯೇಯ - ದೃಷ್ಟಿ"ಯೋಜನೆಯಡಿ ರಸ್ತೆಗಳ ಮೇಲೆ ವಾಹನಗಳ ಒತ್ತಡ ಕಡಿಮೆ ಮಾಡುವುದು, ಜಂಕ್ಷನ್ಗಳಲ್ಲಿ ವಾಹನದ ಸಾಂದ್ರತೆ ಕಡಿಮೆ ಮಾಡುವುದು. ವಾಯುಮಾಲಿನ್ಯ ನಿಯಂತ್ರಿಸುವುದು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದನ್ನು ಸರಿಪಡಿಸುವುದು ಸೇರಿದಂತೆ ಹೊಸದಾಗಿ ಸೇರ್ಪಡೆಗೊಂಡಿರುವ ಪ್ರ್ರದೇಶಗಳಲ್ಲಿ ಮಾರುಕಟ್ಟೆ ಸೌಲಭ್ಯಗಳ ಕೊರೆತ ನೀಗುವಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ನಗರದಲ್ಲಿ 12 ಕಡೆ ಸಿಗ್ನಲ್ ಮುಕ್ತ ಕಾರಿಡಾರ್ಗಳ ನಿರ್ಮಾಣ, 512 ಕಿ.ಮೀ ರಸ್ತೆಗಳ ಅಭಿವೃದ್ಧಿ 40 ಸ್ಥಳಗಳಲ್ಲಿ ಕೆಳ ಮತ್ತು ಮೇಲು ಸೇತುವೆಗಳನ್ನು ನಿರ್ಮಿಸಲಾಗುವುದು ಎಂದ ಸಾರಿಗೆ ಸಚಿವರು ಪಾದಚಾರಿಗಳ ಸುಗಮ ಸಂಚಾರಕ್ಕಾಗಿ 200 ಸುರಂಗಮಾರ್ಗ, 200 ಸ್ಕೈವಾಕ್ಗಳ ನಿರ್ಮಾಣ, 123 ಕೆರೆಗಳ ಜೀರ್ಣೋದ್ಧಾರ, 272 ಉದ್ಯಾನ ವನಗಳ ನಿರ್ಮಾಣ ಮಾಡಲಾಗುವುದು ಎಂದರು.
ಸುಮಾರು 2500 ಕೋಟಿ ರೂ ಅಂದಾಜು ವೆಚ್ಚದಲ್ಲಿ 135 ಕಿ.ಮೀಗಳ 12 ಪ್ರಮುಖ ಕಾರಿಡಾರ್ಗಳನ್ನು ಸಿಗ್ನಲ್ ಮುಕ್ತ ಕಾರಿಡಾರ್ಗಳನ್ನಾಗಿ ಪರಿವರ್ತಿಸುವುದು ಸೇರಿದಂತೆ 2350 ಕೋಟಿ ರೂ ಅಂದಾಜು ವೆಚ್ಚದಲ್ಲಿ ಹೊಸದಾಗಿ ಸೇರಿಸಲ್ಪಟ್ಟ 5 ವಲಯಗಳಲ್ಲಿನ ಗುರುತಿಸಲಾದ 494 ಕಿ.ಮೀ ಉದ್ದದ ಆರ್ಟೀರಿಯಲ್ ಮತ್ತು ಸಭ್ ಅರ್ಟೀರಿಯಲ್ ರಸ್ತೆಗಳ ಅಗಲೀಕರಣ, ಸಬಲೀಕರಣ ಹಾಗೂ ಡಾಂಬರೀಕರಣ ಮಾಡಲಾಗುವುದು ಎಂದ ಸಚಿವರು 355 ಕೋಟಿ ರೂ ಅಂದಾಜು ವೆಚ್ಚದಲ್ಲಿ ರೈಲ್ವೇ ಹಳಿಗಳ ಮೇಲೆ ಹಾಗೂ ಕೆಳಗೆ ಸೇತುವೆಗಳ ನಿರ್ಮಾಣ ಮಾಡಲಾಗುವುದು ಎಂದರು.
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಡಿ ಬೆಂಗಳೂರು ಅಭಿವೃದ್ಧಿಗಾಗಿ ಇನ್ನು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದ ಸಚಿವರು ಬಿ.ಬಿ.ಎಂ.ಪಿ. ಗಳಿಂದ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ 5700 ಕೋಟಿ ರೂ, ರಾಜ್ಯ ಸರ್ಕಾರದಿಂದ 2 ಸಾವಿರ ಕೋಟಿ ರೂ, ಭಾರತ ಸರ್ಕಾರದ ಜೆ.ಎನ್.ಎನ್.ಯು.ಆರ್.ಎಂ. ಯೋಜನೆಯಡಿ 2 ಸಾವಿರ ಕೋಟಿ ಬಾಂಡ್ಗಳು, ಸಾಲಗಳು ಸರ್ಕಾರದ ಗ್ಯಾರೆಂಟಿ ಮೇಲೆ 9300 ಕೋಟಿ ರೂ, ಬಿ.ಡಿ.ಎ ಸಹಕಾರದಿಂದ 2 ಸಾವಿರ ಕೋಟಿ, ಪಿ.ಪಿ.ಪಿ.. ಸಹಭಾಗಿತ್ವದಲ್ಲಿ ಒಂದು ಸಾವಿರ ಕೋಟಿ ರೂ ಸಂಪನ್ಮೂಲ ಕ್ರೋಡಿಕರಣಗೊಳಿಸಲು ಚಿಂತಿಸಲಾಗಿದೆ ಎಂದ ಸಚಿವರು ಈ ಎಲ್ಲಾ ಯೋಜನೆಗಳನ್ನು 3 ವರ್ಷಗಳ ಕಾಲಾವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications