ಬಿಡದಿ ಬಳಿ ಭೀಕರ ಅಪಘಾತ : 8 ಮಂದಿ ದುರ್ಮರಣ
ಮೃತಪಟ್ಟವರನ್ನ ಮಧುರಾ ಗಾರ್ಮೆಂಟ್ಸ್ನ ಸಿಬ್ಬಂದಿಗಳಾದ ರಾಮನಾಥ್, ಗೀತಾ, ಕವಿತಾ, ವಿಜಯ್, ಸಂದೀಪ್, ರಾಜೇಶ್, ಸುರೇಶ್ ಮತ್ತು ವಾಹನ ಚಾಲಕ ಸುರೇಶ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ : ಎಂದಿನಂತೆ ಕೆಲಸ ಮುಗಿಸಿ ರಾಮನಗರದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಧುರಾ ಗಾರ್ಮೆಂಟ್ಸ್ನ ಸಿಬ್ಬಂದಿಗಳಿಗೆ ಸಾವು ಲಾರಿಯ ರೂಪದಲ್ಲಿ ಬಂದೆರಗಿದೆ. ಬೆಂಗಳೂರಿನಿಂದ ಮೈಸೂರಿನೆಡೆಗೆ ತರಕಾರಿ ತುಂಬಿಕೊಂಡು ತೆರಳುತ್ತಿದ್ದ ಲಾರಿ ಮುಂದಿದ್ದ ವಾಹನವೊಂದನ್ನ ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆ ವಿಭಜಕವನ್ನ ದಾಟಿ ಎದುರಿನಿಂದ ಬರುತ್ತಿದ್ದ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಧ್ಯದಾರಿಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಟಾಟಾಸುಮೋ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು ವಾಹನದ ಟೈರ್ ಮತ್ತು ಬಿಡಿಬಾಗಗಳು 50 ಮೀಟರ್ ದೂರದಲ್ಲಿ ಬಿದ್ದಿರುವುದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು. ಭೀಕರ ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಕಾರಣವೆಂದು ಪೋಲೀಸರು ತಿಳಿಸಿದ್ದಾರೆ.
ಶವಗಳನ್ನ ಕೆಂಗೇರಿಯ ರಾಜರಾಜೇಶ್ವರಿನಗರ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಅಪಘಾತದಿಂದ ಮೃತಪಟ್ಟ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿಹಬ್ಬದ ತಯಾರಿಯಲ್ಲಿದ್ದ ಕುಟುಂಬದವರಿಗೆ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿ ಶೋಕ ಮಡುಗಟ್ಟುವಂತೆ ಮಾಡಿದೆ. ಬದುಕಿನ ಬಂಡಿ ಸಾಗಿಸಲು ಗಾರ್ಮೆಂಟ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂದಿಗೆ ಲಾರಿ ಚಾಲಕನೇ ಯಮರೂಪಿಯಾಗಿ ಬಂದು ಕುಟುಂಬಗಳು ಶೋಕದಲ್ಲಿ ಮುಳುಗುವಂತೆ ಮಾಡಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಅಪಘಾತ ನಡೆದಿರುವ ಸ್ಥಳದಿಂದ ಸ್ಪಲ್ಪ ದೂರದಲ್ಲೇ ತರಬೇತಿ ವಾಹನ ಅಪಘಾತಕ್ಕೀಡಾಗ ಕಾರಣ ಇಬ್ಬರು ತರಬೇತಿ ಚಾಲಕರು ಸಾವನ್ನಪ್ಪಿದ್ದರು.
ಅಪಘಾತದ ಸಮಯದಲ್ಲಿ ಬಾರೀ ಮಳೆ ಸುರಿಯುತ್ತಿದ್ದುದರಿಂದ ಸುಮಾರು 1 ಗಂಟೆಗಳ ಕಾಲ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಸಿ.ಪಿ.ಐ ಧರ್ಮೇಂದ್ರ, ಡಿ.ವೈ.ಎಸ್.ಪಿ ದೇವರಾಜ್, ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.