ಗೋಧ್ರಾ : ಮೋದಿ ವಿಚಾರಣೆ ಕೋರ್ಟ್ ಅನುಮತಿ
2002 ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 62 ಮಂದಿ ಭಾಗಿಯಾಗಿದ್ದು, ಈ ಎಲ್ಲರನ್ನೂ ವಿಚಾರಣೆ ಒಳಪಡಿಸಬೇಕು ಎಂದು ಹತ್ಯಾಕಾಂಡದಲ್ಲಿ ಸಜೀವವಾಗಿ ದಹನವಾಗಿದ್ದ ಕಾಂಗ್ರೆಸ್ ನ ಮಾಜಿ ಸಂಸದ ಎಹಸಾನ್ ಜಾಫ್ರಿ ಅವರ ಪತ್ನಿ ಜಾಕೀಯಾ ಜಾಫ್ರಿ ಅವರ ಅರ್ಜಿಯನ್ನು ಪುರಷ್ಕರಿಸಿದ್ದ ಸುಪ್ರಿಂಕೋರ್ಟ್ ಪ್ರತ್ಯೇಕ ಸಮಿತಿ ರಚಿಸಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು.
ಸುಪ್ರಿಂಕೋರ್ಟ್ ನಿಂದ ರಚಿತವಾಗಿದ್ದ ಸಮಿತಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲು ಮುಂದಾಗಿದ್ದರಿಂದ ಬಿಜೆಪಿ ಶಾಸಕ ಕಲುಬಾಯಿ ಮಳಿವಾದ ಎಂಬುವವರು ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿಚಾರಣೆಯನ್ನು ನಿಲ್ಲಿಸಬೇಕು ಎಂದು ಗುಜರಾತ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ಎಚ್ ವಾಘೇಲಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ, ಗೋಧ್ರಾ ನಂತರದ ಹತ್ಯಾಕಾಂಡದ ವಿಚಾರಣೆ ಮುಂದುವರೆಸಲು ಹಸಿರು ನಿಶಾನೆ ತೋರಿಸಿದರು. ಗೋಧ್ರಾ ಹತ್ಯಾಕಾಂಡದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ, ಅವರ ಸಂಪುಟ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಘಟನೆಯಲ್ಲಿ ಕೈವಾಡವಿದೆ ಎಂದು ಜಾಕೀಯಾ ಜಾಫ್ರಿ ಆರೋಪಿಸಿದ್ದರು.
(ಏಜನ್ಸೀಸ್)