ಆ.15ಕ್ಕೆ ಶಿವಮೊಗ್ಗ ಇಂಟರ್ಸಿಟಿ ರೈಲು?
ಬೆಂಗಳೂರು, ಜು.20: ಬೆಂಗಳೂರು- ಶಿವಮೊಗ್ಗ ನಡುವೆ ಆಗಸ್ಟ್ 15ರೊಳಗೆಇಂಟರ್ಸಿಟಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ತಮ್ಮ ನಿವಾಸಕ್ಕೆ ಶನಿವಾರ ಆಹ್ವಾನಿಸಿ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಇಂಟರ್ಸಿಟಿ ರೈಲು ಆರಂಭಿಸುವ ಕುರಿತು ಮುನಿಯಪ್ಪನ ವರಿಂದ ಭರವಸೆ ಸಿಕ್ಕಿದೆ ಎಂದರು.
ಕೇಂದ್ರ ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಹಲವು ಹೊಸ ಯೋಜನೆಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನಿಯಪ್ಪನವರನ್ನು ಆಹ್ವಾನಿಸಿ ಅಭಿನಂದನೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗೆ ಬಹುಮುಖ್ಯ ಯೋಜನೆಗಳಾದ ತಾಳಗುಪ್ಪ-ಹೊನ್ನಾವರ ಹಾಗೂ ಕುಡುಚಿ-ಬಾಗಲಕೋಟ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ನೇತ್ರಾವತಿ ತಿರುವಿಗೆ ಒಲವು
ನೇತ್ರಾವತಿ ತಿರುವು ಯೋಜನೆ ಕುರಿತು ಮುನಿಯಪ್ಪನವರು ಪ್ರಸ್ತಾಪಿಸಿ ದ್ದಾರೆ. 2 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇದರಲ್ಲಿ 500-600 ಟಿಎಂಸಿ ನೀರು ಬಳಸಿಕೊಳ್ಳಬಹುದು ಎಂದು ಪರಮಶಿವಯ್ಯ ವರದಿ ನೀಡಿದ್ದಾರೆ. ವರದಿ ಅನುಷ್ಠಾನ ಕುರಿತು ಸರಕಾರ ಒಲವು ಹೊಂದಿದೆ. ಯೋಜನೆಗೆ ಅಗತ್ಯ ನೆರವನ್ನು ಕೇಂದ್ರದಿಂದ ಕೊಡಿ ಸುವ ಭರವಸೆ ಮುನಿಯಪ್ಪನವರಿಂದ ಸಿಕ್ಕಿದೆ ಎಂದು ಯಡಿಯೂರಪ್ಪ ಹೇಳಿದರು.
ತಾವು ಮುಂದಿನ ತಿಂಗಳು 2ಮತ್ತು 3ರಂದು ದಿಲ್ಲಿಗೆ ತೆರಳಲಿದ್ದು, ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದ ಜತೆ ಈ ಕುರಿತು ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದರು. ಮುನಿಯಪ್ಪ ಮಾತನಾಡಿ, ಬರಪೀಡಿತ ಜಿಲ್ಲೆಗಳಾದ ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ನೀರು ಉಣಿಸಲು ನೇತ್ರಾವತಿ ತಿರುವು ಯೋಜನೆ ಬಹಳ ಅಗತ್ಯವಿದೆ ಎಂದರು.ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದೇನೆ. ವಿರೋಧ ಇದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯೋಜನೆ ಅನು ಷ್ಠಾನಕ್ಕೆ ತರುವಂತೆ ಕೋರಲಾ ಗಿದೆ. ಕೇಂದ್ರದಿಂದ ಅಗತ್ಯ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆ ಕೈಗೊಳ್ಳಲು ಆಸಕ್ತಿ ತೋರಿಸಿದ ರಾಜ್ಯಗಳಲ್ಲಿ ಕರ್ನಾಟಕ ಮುಂದಿದೆ. ರೈಲ್ವೆ ಯೋಜನೆಗಳಿಗೆ 250 ಕೋಟಿ ರೂ. ನೀಡಲು ರಾಜ್ಯ ಸರಕಾರ ಮುಂದೆ ಬಂದಿದ್ದು, ಕೇಂದ್ರದಿಂದಲೂ ಅಷ್ಟೇ ಪ್ರಮಾಣದ ಅನುದಾನ ನೀಡಿ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಮುನಿಯಪ್ಪ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications