ಮುಂಬೈ ದಾಳಿಯಲ್ಲಿ ಲಷ್ಕರ್ ಕೈವಾಡ ಒಪ್ಪಿಕೊಂಡ ಪಾಕ್

ಪಾಕಿಸ್ತಾನದ ಯಾವ ಪ್ರಜೆಯೂ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗವಹಿಸಿಲ್ಲ ಎಂದೇ ಪಾಕ್ ವಾದಿಸುತ್ತ ಬಂದಿತ್ತು. ಭಾರತ ಪಾಕಿಸ್ತಾನಕ್ಕೆ ನೀಡಿದ್ದ 36 ಪುಟಗಳ ಸಾಕ್ಷ್ಯಾಧಾರವನ್ನು ಪಾಕ್ ಪರಿಗಣಿಸದೆ ಪಾಕ್ ಪ್ರಜೆಗಳ ಕೈವಾಡವನ್ನು ತಳ್ಳಿಹಾಕುತ್ತಾ ಬಂದಿತ್ತು. ಬಂಧಿತನಾಗಿರುವ ಅಜ್ಮಲ್ ಕಸಬ್ ಕೂಡ ಪಾಕ್ ಪ್ರಜೆಯಲ್ಲ ಎಂದು ಪಾಕಿಸ್ತಾನ ಹೇಳುತ್ತಿತ್ತು.
ಕಳೆದ ವರ್ಷ ನವೆಂಬರ್ 26ರಂದು ಛತ್ರಪತಿ ಶಿವಾಜಿ ಟರ್ಮಿನಸ್, ತಾಜ್ ವೆಸ್ಟೆಂಡ್, ಓಬೆರಾಯ್ ಹೊಟೇಲುಗಳಲ್ಲಿ ನಡೆದ ಭೀಕರ ಮಾರಣಹೋಮದಲ್ಲಿ 170ಕ್ಕೂ ಹೆಚ್ಚಿನ ಅಮಾಯಕರು ಬಲಿಯಾಗಿದ್ದರು. ಭಾರತಕ್ಕೆ ಬಂದಿದ್ದ 10 ಉಗ್ರರಲ್ಲಿ ಕಸಬ್ ಮಾತ್ರ ಬಂಧಿತನಾಗಿದ್ದ.
ಪಾಕಿಸ್ತಾನ ಭಾರತಕ್ಕೆ ನೀಡಿರುವ ದಾಖಲೆಯಲ್ಲಿ ಲಷ್ಕರ್-ಇ-ತೊಯ್ಬಾದ ನಾಯಕ ಝಕಿಉರ್-ರೆಹಮಾನ್ ಲಕ್ವಿ ಮತ್ತು ಇತರ ನಾಲ್ವರನ್ನು ಪಾಕಿಸ್ತಾನ ಪ್ರಮುಖ ಆರೋಪಿಗಳನ್ನಾಗಿ ಮಾಡಿದೆ. ಆ ನಾಲ್ವರಲ್ಲಿ ಹಮದ್ ಅಮಿನ್ ಸಾದಿಕ್ ನವೆಂಬರ್ 26ರ ದಾಳಿಗೆ ಹಣಸಂದಾಯ ಮಾಡಿದ್ದ, ಮಝರ್ ಇಕ್ಬಾಲ್ ದಾಳಿ ಮಾಡಿದ ಉಗ್ರರ ನೇತೃತ್ವ ವಹಿಸಿದ್ದ, ಅಬ್ದುಲ್ ವಾಜಿದ್ ಕಂಪ್ಯುಟರ್ ತಜ್ಞನಾಗಿದ್ದಾನೆ ಮತ್ತು ಶಾಹಿದ್ ಜಮೀಲ್ ಉಗ್ರರನ್ನು ಕರೆತಂದ ಹಡಗು ಅಲ್ ಹುಸೇನಿಯ ನಾಯಕನಾಗಿದ್ದ.
ದಾಖಲೆಯಲ್ಲಿ ಮೊಹಮ್ಮದ್ ಅಮ್ಜದ್ ಖಾನ್, ಇಫ್ತಿಕಾರ್ ಅಲಿ, ಶಾಹಿದ್ ಗಫೂರ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಉಸ್ಮಾನ್, ಅತೀಕ್-ಉರ್-ರೆಹಮಾನ್ ಮೊದಲಾದವರನ್ನು ಹೆಸರಿಸಿದೆ. ಆರೋಪಿಗಳಲ್ಲಿ ಲಕ್ವಿ ಮತ್ತಿತರ ನಾಲ್ವರು ಬಂಧಿತರಾಗಿದ್ದಾರೆ. ಈ ಐವರ ವಿಚಾರಣೆ ರಾವಳ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆಯುತ್ತಿದೆ.
(ಏಜೆನ್ಸೀಸ್)












Click it and Unblock the Notifications