ಕೆಎಚ್ ಬಿ ಹಗರಣ : ಮುಗಿಯದ ರಗಳೆ

HD Revanna
ಬೆಂಗಳೂರು, ಜು. 16 : ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಲ್ಲಿ ನಡೆದ ಕೋಟ್ಯಂತರ ರುಪಾಯಿ ಅವ್ಯವಹಾರ ಕುರಿತಂತೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷಗಳಿಂದ ಪಟ್ಟು. ಸರಕಾರ ಇದಕ್ಕೆ ನಕಾರ ವ್ಯಕ್ತಪಡಿಸಿದ್ದರಿಂದ ವಿಧಾನಸಭೆಯ ಇಂದಿನ ಕಲಾಪ ಬಹುತೇಕ ಇದೇ ರಗಳೆಯಲ್ಲೆ ಮುಗಿದು ಹೋಯಿತು. ಇನ್ನೂ ಮೇಲ್ಮನೆಯಲ್ಲಿ ಕೂಡಾ ಬೆಂಗಳೂರಿನಲ್ಲಿ ನಡೆಯುತ್ತಿರುವ ಒಂಟಿ ಮಹಿಳೆಯರ ಕೊಲೆಗಳು ಕುರಿತು ಪ್ರತಿಧ್ವನಿಸಿತು. ಕೊಲೆ, ದರೋಡೆ ಶಬ್ದಗಳದ್ದೆ ಭರಾಟೆ ಮುಗಿಲು ಮುಟ್ಟಿತ್ತು.

ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಗೃಹ ಮಂಡಳಿಯಲ್ಲಿ ಆಗಿರುವ ಹಗರಣದ ಬಗ್ಗೆ ಚರ್ಚೆ ನಡೆಸಿದರು. ಇದರಿಂದ ಸರಕಾರ ಮತ್ತಷ್ಟು ಮುಜಗರಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಗ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳು ದಟ್ಟವಾಗಿದ್ದವು. ಆದರೆ, ಇದಕ್ಕೂ ಮುಂಚೆ ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮುಖ್ಯಕಾರ್ಯದರ್ಶಿ ಅವರಿಂದ ತನಿಖೆ ನಡೆಸುತ್ತೇವೆ ಎಂಬ ಹೇಳಿಕೆಯನ್ನು ಪ್ರತಿಪಕ್ಷಗಳು ಸಾರಾಸಗಟಾಗಿ ತಿರಸ್ಕರಿಸಿದವು.

ಗೃಹ ಮಂಡಳಿಯ ಪ್ರಸ್ತಾಪವಾಗಿ ಮೂರನೇ ದಿನವಾದ ಇಂದು ಕೂಡಾ 4ನೇ ಬಾರಿಗೆ ಸ್ಪೀಕರ್ ಜಗದೀಶ್ ಶೆಟ್ಟರ್ ಎರಡೂ ಬಣಗಳ ನಡುವೆ ಸಂಧಾನ ನಡೆಸಿದರಾದರೂ ಎರಡೂ ಕಡೆಯಿಂದ ಬಿಗಿ ನಿಲುವು ಸಡಿಲವಾಗದ ಕಾರಣ ಸಂಧಾನ ವಿಫಲವಾಯಿತು. ಬೆಳಗ್ಗೆ 11 ಗಂಟೆಗೆ ಸೇರಬೇಕಿದ್ದ ವಿಧಾನಸಭೆ ಮಧ್ಯಾಹ್ನ 1.05ಕ್ಕೆ ಸೇರಿತಾದರೂ ಪ್ರತಿಪಕ್ಷಗಳ ಪಟ್ಟುಬಿಡದೆ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಕೇವಲ ಎರಡೇ ನಿಮಿಷದಲ್ಲಿ ಸದನದ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು. ಭೋಜನದ ನಂತರವೂ ಗೃಹ ಮಂಡಳಿಯ ಹಗರಣದಿಂದ ಪ್ರತಿಪಕ್ಷಗಳು ಹಿಂದೆ ಸರಿದಿರುವುದರಿಂದ ಇಂದಿನ ಕಲಾಪ ಕೂಡಾ ಹಗರಣದಲ್ಲಿ ಹೋಮವಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಬಳಿ ಸುಮಾರು 959 ಎಕರೆ ಭೂವ್ಯವಹಾರದಲ್ಲಿ ಅಕ್ರಮ ನಡೆದಿದೆ. ಇದರ ತನಿಖೆಯನ್ನು ಸ್ವಾಯತ್ತ ಸಂಸ್ಥೆಗಳಾದ ಸಿಬಿಐ ಅಥವಾ ಲೋಕಾಯುಕ್ತ ಇಲಾಖೆ ವಹಿಸಬೇಕು ಎನ್ನುವುದು ಪ್ರತಿಪಕ್ಷಗಳ ಕೂಗು.

ಮೇಲ್ಮನೆಯಲ್ಲಿ ಕೊಲೆ, ದರೋಡೆಗಳು

ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆದ ಒಂಟಿ ಮಹಿಳೆಯರ ಕೊಲೆ, ಜೋಡಿ ಕೊಲೆ, ದರೋಡೆ ಪ್ರಕರಣಗಳು ಮೇಲ್ಮನೆಯಲ್ಲಿ ಗದ್ದಲ ಉಂಟು ಮಾಡಿದ್ದಲ್ಲದೇ, ಪ್ರತಿಪಕ್ಷಗಳು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನ ಪರಿಷತ್ ನಲ್ಲಿ ಜರುಗಿತು. ಆಡಳಿತ ಪಕ್ಷದ ವಿಮಲಾಗೌಡ ಕೇಳಿದ ಪ್ರಶ್ನೆ ಪ್ರತಿಪಕ್ಷಗಳಿಗೆ ರಾಮಬಾಣವಾಗಿ ಸರಕಾರದ ಮೇಲೆ ಮುಗಿಬೀಳಲು ಕಾರಣವಾಯಿತು.

ಪ್ರತಿಪಕ್ಷದ ಸದಸ್ಯರಾದ ಮಲ್ಲಾಜಮ್ಮ, ಮೋಟಮ್ಮ ಅವರು ಒಂಟಿ ಮಹಿಳೆ ಕೊಲೆ, ಜೋಡಿ ಕೊಲೆ, ದರೋಡೆ, ಅಪಹರಣ ಮತ್ತಿತರ ಘಟನೆಗಳು ನಿತ್ಯ ನಡೆಯುತ್ತಿವೆ. ಮಹಿಳೆಯರು ಭೀತಿಗೊಳಗಾಗಿದ್ದಾರೆ. ಇಂತ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರಕಾಶ್ ರಾಥೋಡ್, ಒಂದೇ ತಿಂಗಳಲ್ಲಿ 50 ಕೊಲೆಗಳಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದರು. ಕೇವಲ 22 ಗಂಟೆಯೊಳಗೆ 8 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಮಹಿಳೆಯರಿಗೆ ಮಂಗಳಸೂತ್ರಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ವಿಷಾಧಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ವಿ ಎಸ್ ಆಚಾರ್ಯ, ಕಳೆದ 13 ತಿಂಗಳ ಆಡಳಿತಾವಧಿಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಚಿನ್ನ, ಬೆಳ್ಳಿ ಒಡವೆ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ಕೋಟ್ಯಂತರ ರುಪಾಯಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ವಾಪಸ್ಸು ಮಾಡಿದ್ದೇವೆ ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+