ಟೆಕ್ಕಿಗಳನ್ನು ವಂಚಿಸುತ್ತಿದ್ದವನ ಬಂಧನ
ಬೆಂಗಳೂರು, ಜು. 13 : ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಸಾಫ್ಟ್ ವೇರ್ ಉದ್ಯೋಗಿಗಳನ್ನು ನಂಬಿಸಿ ವಂಚಿಸುತ್ತಿದ್ದ ಕೊಲ್ಕತ್ತಾ ಮೂಲದ ವ್ಯಕ್ತಿಯೊಬ್ಬನನ್ನು ಅಶೋಕ ನಗರದ ಪೊಲೀಸ್ ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.
ಸಂಜಯ್ ಸಿಂಗ್ ಠಾಕೂರ್ ಅಲಿಯಾಸ್ ಸಂಜಯ್ ರಾಣಾ ಸಿಂಗ್ (48) ಬಂಧಿತ ವ್ಯಕ್ತಿಯಾಗಿದ್ದಾನೆ. ತಾನು ಎಂಬಿಎ ಪದವೀಧರ. ಮುಂಬೈನ ಟಿವಿಎಸ್ ಸಂಸ್ಥೆಯ ಸಿಇಓ ಎಂದು ಕೆಲ ವಿಸಿಟಿಂಗ್ ಕಾರ್ಡ್ ಗಳಲ್ಲಿ ಮತ್ತು ಇದೇ ಸಂಸ್ಥೆಯ ಆಪರೇಷನ್ ವಿಭಾಗದ ಮುಖ್ಯಸ್ಥ ಎಂದು ಇನ್ನೂ ಹಲವು ಕಾರ್ಡ್ ಗಳಲ್ಲಿ ಹೆಸರು ನಮೂದಿಸಿಕೊಂಡಿದ್ದ. ಮಿಲಿಟರಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದಾನೆ ಎಂಬ ಮಾಹಿತಿ ಕೂಡಾ ನೀಡಿದ್ದ. ಕೋರಮಂಗಲದ ಪಿಜಿಯೊಂದರಲ್ಲಿ ಸಂಜಯ್ ಸಿಂಗ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುಕೆ, ಯುಎಸ್ ಎ ಮತ್ತು ಮಲೇಶಿಯಾದಲ್ಲಿ ಕೆಲಸ ಕೊಡಿಸುವುದಾಗಿ ವೆಬ್ ಮೂಲಕ ಅರ್ಜಿ ಅಹ್ವಾನಿಸಿ ನಂತರ ಒಂದಿಷ್ಟು ಹಣ ತೆಗೆದುಕೊಂಡು ವಂಚಿಸುತ್ತಿದ್ದ. ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಮೊನಾರ್ಕ್ ಹೋಟೆಲ್ ನಲ್ಲಿ ಸಂದರ್ಶನ ನಡೆಸಿದ್ದು, ಸುಮಾರು 300 ಮಂದಿ ಭಾಗವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎನ್ ಆರ್ಐಗಳಿಗೆ ಬೆಂಗಳೂರಿನಲ್ಲಿ ನಿವೇಶನ ಕೊಡಿಸುವುದಾಗಿ ಕೇರಳದ ಮೂಲಕ ಚಾಕೋ ಎಂಬ ವ್ಯಕ್ತಿ ಮೋಸ ಮಾಡಿರುವ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
(ಏಜನ್ಸೀಸ್)