ಮುಖ್ಯವಾಹಿನಿಗೆ ಅಲೆಮಾರಿ ಜನಾಂಗ : ಸುಧಾಕರ್
ಬೆಂಗಳೂರು, ಜು.11: ನಮ್ಮದು ಬಹುಸಂಸ್ಕೃತಿಗಳ ದೇಶ. ಕೆಲವು ಸಮುದಾಯಗಳು ಮುಖ್ಯವಾಹಿನಿಯಿಂದ ದೂರ ಉಳಿದಿದ್ದು, ಊರು ಊರು ಅಲೆದು ಜೀವನ ಸಾಗಿಸುತ್ತಿರುವುದು ನಮ್ಮ ಸಮಾಜದ ಕಪ್ಪು ಚುಕ್ಕೆಯಾಗಿದೆ. ಅವರನ್ನು ಒಂದು ಕಡೆ ನೆಲೆಯೂರುವಂತೆ ಮಾಡಿ ಮುಖ್ಯವಾಹಿನಿಗೆ ಸೇರಿಸಬೇಕಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಸುಧಾಕರ್ ತಿಳಿಸಿದರು. ಅವರು ಶುಕ್ರವಾರ ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆಯ ಎರಡನೇ ಕಂತಿನ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶೈಕ್ಷಣಿಕವಾಗಿ ಈ ಜನಾಂಗ ಮುಂದೆ ಬರಬೇಕು ಈ ಉದ್ದೇಶಕ್ಕಾಗಿ 4 ಮೊರಾರ್ಜಿ ಶಾಲೆಗಳನ್ನು 16 ಕೋಟಿ ರು ಯೋಜನೆಯಡಿ ತೆರೆಯಲಾಗಿದೆ. ಅವರ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ. ಈ ಜನಾಂಗ ಕುರಿತ ಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದ ಸಚಿವರು ಈ ಜನಾಂಗದ ಬದುಕು, ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲುವ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಯತ್ನವನ್ನು ಶ್ಲಾಘಿಸಿದರು.
ಪುಸ್ತಕಗಳನ್ನು ಬಿಡುಗಡೆಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖಾ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಅವರು ಅಲೆಮಾರಿ ಜನಾಂಗದ ಸಾಂಸ್ಕೃತಿಕ ಬದುಕನ್ನು ದಾಖಲಿಸುವ ಮೂಲಕ ಅವರ ಬದುಕು ಬವಣೆಗೆ ಧ್ವನಿ ನೀಡಲಾಗಿದೆ. ಇದು ಅತ್ಯಂತ ಸಾಮಾಜಿಕ ಕಳಕಳಿಯ ಕೆಲಸವಾಗಿದೆ. ಪುಸ್ತಕ ಪ್ರಾಧಿಕಾರಕ್ಕೆ ಕಳೆದ ವರ್ಷ 4 ಕೋಟಿ ರು.ಗಳನ್ನು ನೀಡಲಾಗಿದ್ದು. ಈ ಶ್ಲಾಘ್ಯ ಪ್ರಯತ್ನಕ್ಕೆ ಸರ್ಕಾರದಿಂದ ಅಗತ್ಯವಾದಷ್ಟು ಅನುದಾನವನ್ನು ಬಿಡುಗಡೆಮಾಡಲಾಗುವುದು ಎಂದರು. ರಾಜ್ಯಾದ್ಯಂತ ಕನ್ನಡ ಪುಸ್ತಕ ಮಳಿಗೆಗಳ ಸ್ಥಾಪನೆ ಮತ್ತು ಮಾರುಕಟ್ಟೆ ಜಾಲವನ್ನು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹತ್ತು ಸಂಪುಟಗಳನ್ನು ಹೊರತರಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಆಯೋಗದ ಅಧ್ಯಕ್ಷರಾದ ನೆಹರೂ ಚ. ಓಲೇಕಾರ ಮಾತನಾಡುತ್ತಾ ರಾಜ್ಯದಲ್ಲಿ 25 ಲಕ್ಷ ಅಲೆಮಾರಿ ಜನರಿದ್ದು ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ಕಲಾವಿದರಿಗೆ ನೀಡುವ ಮಾಸಾಶನ ಯಾವುದು ಈ ಜನಾಂಗಕ್ಕೆ ದೊರೆಯುತ್ತಿಲ್ಲ. ಅತ್ಯಂತ ಪ್ರತಿಭಾವಂತ ಗಾಯಕರು ಇವರಲ್ಲಿ ಇದ್ದಾರೆ. ಯೋಜನೆಗಳ ಫಲವನ್ನು ಇವರಿಗೆ ದೊರಕಿಸುವಲ್ಲಿ ಸರ್ಕಾರ ಸ್ವಲ್ಪಮಟ್ಟಿ ಉದಾರ ಧೋರಣೆಯನ್ನು ಅನುಸರಿಸಬೇಕಾಗುತ್ತದೆ ಎಂದರು.
ಸಮಾರಂಭದಲ್ಲಿ ಅಲೆಮಾರಿ ಜನಾಂಗ ಒಕ್ಕೂಟದ ಅಧ್ಯಕ್ಷರಾದ ಭಾಸ್ಕರದಾಸ್ ಹೆಕ್ಕರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ದ್ವಾರಕನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ಧರಾಮಯ್ಯ, ಶೇಷಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)