ಅಧಿವೇಶನ : ಹಾಲು ಒಕ್ಕೂಟ ಸೂಪರ್ ಸೀಡ್ ಏಕೆ?

ಬೆಂಗಳೂರು, ಜು. 10 : ಮೈಸೂರಿನ ಕೋಮುಗಲಭೆ ಮೇಲ್ಮನೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ ಕೋಲಾಹಲ ವಾತಾವರಣ ಸೃಷ್ಟಿಸಿ ಪ್ರತಿಪಕ್ಷದ ಸದಸ್ಯರು ನಿಲುವಳಿ ಸೂಚನೆಗೆ ಪಟ್ಟುಹಿಡಿದ ಪ್ರಸಂಗ ಜರುಗಿತು. ಸದನದ ಕಲಾಪ ಆರಂಭದಲ್ಲಿ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ನಿಲುವಳಿ ಸೂಚನೆ ಮಂಡಿಸಿ ಸಮಸ್ಯೆ ಗಂಭೀರ ಸ್ವರೂಪವಾಗಿರುವುದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎ ಎಂ ಹಿಂಡಸಗೇರಿ ನಾಲ್ಕು ತಿಂಗಳಿಂದ ಮೈಸೂರಿನಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. 5 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ತಲ್ಲಣಗೊಂಡಿದೆ. ಅಲ್ಲಿ ಶಾಂತಿ ನೆಲಸಬೇಕು. ಜಾತಿಗಳ ಸಂಘರ್ಷ ತಪ್ಪಿಸಬೇಕು. ಆರೋಪ ಪ್ರತ್ಯಾರೋಪ ನಿಲ್ಲಿಸಿ ಪಕ್ಷಾತೀತವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಜೆಡಿಎಸ್ ಮುಖಂಡ ಎಂ ಸಿ ನಾಣಯ್ಯ ಹೇಳಿದರು.

ಪ್ರತಿಪಕ್ಷಗಳು ಹಿಡಿದ ಬಿಗಿಪಟ್ಟಿಗೆ ಕೋಪಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿ, ಮೈಸೂರು ಗಲಭೆ ವ್ಯವಸ್ಥಿತ ಸಂಚು. ಬೇರೆ ಬೇರೆ ರಾಜ್ಯಗಳಿಂದ ಮೈಸೂರಿಗೆ ಬಂದು ಗಲಭೆ ಸೃಷ್ಟಿಸುತ್ತಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ಲಭ್ಯವಾಗಿದೆ. ಅಲ್ಲಿನ ಹಿರಿಯ ಅಧಿಕಾರಿಗಳ ಗಾಯಗೊಂಡಿದ್ದಾರೆ ಎಂದರು. ಶಾಂತಿ ನೆಲೆಸುವ ಸಲುವಾಗಿ ಸರಕಾರ ಎಲ್ಲ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಮನವಿ ಮಾಡಿಕೊಂಡರು.

ಜೆಡಿಎಸ್ ಸಭಾತ್ಯಾಗ

ಗುಲ್ಬರ್ಗಾ ಹಾಲು ಒಕ್ಕೂಟದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ವಿಧಾನಸಭೆಯಲ್ಲಿಂದು ಸಭಾತ್ಯಾಗ ಮಾಡಿತು. ರಾಜಕೀಯ ದುರುದ್ದೇಶದಿಂದ ಹೊರಡಿಸಿರುವ ಗುಲ್ಬರ್ಗಾ ಹಾಲು ಒಕ್ಕೂಟದ 9 ಮಂದಿ ಆಡಳಿತ ಸದಸ್ಯರನ್ನು ಅನರ್ಹಗೊಳಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಮುಂದಿನ ಬಾವಿಗೆ ತೆರಳಿ ಜೆಡಿಎಸ್ ಸದಸ್ಯರು ಕೆಲ ಕಾಲ ಧರಣಿ ನಡೆಸಿದರು. ಸರಕಾರ ಮತ್ತು ಜೆಡಿಎಸ್ ನಡುವೆ ವಾದ ವಿವಾದ ನಡೆದಾಗ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೂರು ಬಾರಿ ಮಧ್ಯೆ ಪ್ರವೇಶಿಸಿ ಸಲಹೆ ನೀಡಿದರೂ ಪ್ರಯೋಜನವಾಗಲಿಲ್ಲ.

ನಿಗದಿತ ಸಮಯಕ್ಕೆ ಬನ್ನಿ

ನಿಗದಿತ ಸಮಯಕ್ಕೆ ಸದನಕ್ಕೆ ಹಾಜರಾಗುವಂತೆ ಸದಸ್ಯರಿಗೆ ವಿಧಾನಸಭೆ ಸ್ಪೀಕರ್ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಂದು ಸೂಚನೆ ನೀಡಿದರು. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಬಹುತೇಕ ಸದಸ್ಯರ ಹಾಜರಾತಿ ಕೊರತೆ ಗಮನಿಸಿ ಈ ಸೂಚನೆ ನೀಡಿದರು. ಬೆಳಗ್ಗೆ 10.30ಕ್ಕೆ ಸದನ ಸಮಾವೇಶಗೊಳ್ಳಬೇಕಿತ್ತಾದರೂ ಸದಸ್ಯರು ತಡವಾಗಿ ಆಗಮಿಸಿದ್ದರಿಂದ ಸದನವನ್ನು ವಿಳಂಬವಾಗಿ ಆರಂಭಿಸಬೇಕಿದೆ ಎಂದು ಶೆಟ್ಟರ್ ವಿವರಿಸಿದರು.

ನೇಮಕಾತಿ ನಿಯಮಾವಳಿಗೆ ತಿದ್ದುಪಡಿ : ಕಾಗೇರಿ

ನೇಮಕಾತಿ ನಿಯಮಾವಳಿಗೆ ಸರಕಾರ ಶೀಘ್ರದಲ್ಲೇ ಎಲ್ಲ ಶಿಕ್ಷಕರ ಅನ್ವಯವಾಗುವಂತೆ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ವಿಧಾನ ಪರಿಷತ್ ನಲ್ಲಿಂದು ತಿಳಿಸಿದರು. ಈಗಾಗಲೇ ನೇಮಕಾತಿ ನಿಯಮಾವಳಿಗೆ ಸಂಬಂಧಿಸಿದಂತೆ ಪರಿಶೀಲನಾ ಸಮಿತಿಯು ಪರಿಶೀಲನೆ ಆರಂಭಿಸಿದ್ದು, ಕಾನೂನು ಇಲಾಖೆ, ಆಡಳಿತ ಹಾಗೂ ಸಿಬ್ಬಂದಿ ಸುಧಾರಣೆ ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿದೆ. ಇದರ ಪ್ರಸ್ತಾವನೆಯನ್ನು ಮುಖ್ಯಕಾರ್ಯದರ್ಶಿಗಳ, ಅಪರ ಕಾರ್ಯದರ್ಶಿಯವರ ಪರಿಶೀಲನೆಗೆ ಮಂಡಿಸಿದ್ದು, ಒಪ್ಪಿಗೆ ಪಡೆದ ನಂತರ ಸರಕಾರ ತಕ್ಷಣವೇ ತಿದ್ದುಪಡಿ ಮಾಡಲು ಸಿದ್ಧವಿದೆ ಎಂದು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+