ಸಲಿಂಗರತಿ ಸಕ್ರಮಬೇಡ : ಮೌಲ್ವಿಗಳು
ನವದೆಹಲಿ, ಜು.1 : ಭಾರತೀಯ ದಂಡ ಸಂಹಿತೆ 377 ನೇ ವಿಧಿಗೆ ತಿದ್ದುಪಡಿ ತರುವ ಕುರಿತು ಭಾರತೀಯ ಮುಸ್ಲಿಂ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಸಲಿಂಗ ರತಿ ಎನ್ನುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಸಲಿಂಗರತಿ ಸಕ್ರಮಗೊಳಿಸುವುದರಿಂದ ನೈತಿಕತೆ ಮತ್ತು ಧಾರ್ಮಿಕ ಆಚರಣೆಗಳು ಮೇಲೆ ದಾಳಿ ನಡೆಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.
ಜಮಾತೆ ಇ ಇಸ್ಲಾಮಿ ಅಧ್ಯಕ್ಷ ಮೌಲಾನಾ ಜಲಾಲುದ್ದೀನ್ ಓಮರಿ, ದಾರೂಲ್ ಉಲಮ್ ವಕ್ಫ್ ನ ಮೌಲಾನಾ ಮೊಹ್ಮದ್ ಸಲೀಂ ಕಾಶಿಂ, ಶಾಹಿ ಇಮಾಮ್ ಆಫ್ ಜಾಮಾ ಮಸೀದ್ ನ ಮೌಲಾನಾ ಮುಫ್ತಿ ಮುಕ್ರಮ್ ಅಹ್ಮದ್ ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು ಮುಸ್ಲಿಂ ಧರ್ಮದ ಮುಖಂಡರು, ಯಾವುದೇ ಕಾರಣಕ್ಕೂ ಸಲಿಂಗ ರತಿ ಸಕ್ರಮಗೊಳಿಸಬಾರದು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಸಲಿಂಗ ರತಿ ಸಕ್ರಮದಿಂದ ಸಮಾಜದ ಮೇಲೆ ಭಾರಿ ಪರಿಣಾಮ ಉಂಟಾಗುತ್ತದೆ. ಇದರಿಂದ ಧರ್ಮದ ನೈತಿಕತೆ ನಾಶವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಕಾಯ್ದೆಯ 377 ನೇ ವಿಧಿಗೆ ತಿದ್ದುಪಡಿ ತರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಈಗ ತದ್ವಿರುದ್ಧವಾದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿತ್ತು. ಸಲಿಂಗ ರತಿಯನ್ನು ಸಕ್ರಮ ಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈ ಮುಂಚೆ ಹೇಳಿದ್ದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಅವರು ನಂತರ ಅದನ್ನು ನಿರಾಕರಿಸಿದ್ದರು.
ಈ ಕುರಿತು ಸ್ಪಷ್ಟೀಕರಣ ನೀಡಿದ್ದ ಮೋಯ್ಲಿ ಅವರು, ಸಲಿಂಗರತಿಯನ್ನು ಸಕ್ರಮ ಗೊಳಿಸಲಾಗುವುದು ಎಂದು ನಾನು ಎಂದೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಐಪಿಸಿಸೆಕ್ಷನ್ 377 ರ ವಿಧಿಗಳನ್ನು ಇನ್ನೂ ಪರಿಶೀಲಿಸಿಲ್ಲ. ಸಚಿವ ಸಂಪುಟದ ಒಬ್ಬ ಸಚಿವ ಕಾಯ್ದೆಯನ್ನು ಬದಲಿಸುವ ಅಥವಾ ಬದಲಿಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಮೊಯ್ಲಿ ಪ್ರಶ್ನಿಸಿದ್ದರು.
(ಏಜನ್ಸೀಸ್)












Click it and Unblock the Notifications