ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯಸನ್ನದ್ದ
ಧಾರವಾಡ, ಜೂ. 30 : ಗಡಿಪ್ರದೇಶಗಳ 52 ತಾಲ್ಲೂಕುಗಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಕನ್ನಡ ನಾಡು ನುಡಿಗಳಿಗಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಪರಿಹಾರ ಕ್ರಿಯಾ ಯೋಜನೆಗಳನ್ನು ರೂಪಿಸಲು ಸನ್ನದ್ದವಾಗಿದೆ.
ಈ ವಿಷಯವನ್ನು ತಿಳಿಸಿರುವ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಕಾಂತ ಗುರಪ್ಪ ಬೆಲ್ಲದ ಅವರು ಗಡಿ ಭಾಗದ ಎಲ್ಲಾ 15 ಜಿಲ್ಲೆ ಹಾಗೂ 52 ತಾಲ್ಲೂಕುಗಳಿಗೆ ಭೇಟಿ ನೀಡಿ ಆ ಭಾಗದ ಜನರ ಭಾವನೆ, ಆಶಯ, ಆರ್ಥಿಕ ಸಮಸ್ಯೆ, ಕನ್ನಡ ಭಾಷೆಯ ಸ್ಥಿತಿಗತಿ ಅರಿತು, ಅಲ್ಲಿನ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ, ಸಂವಾದ ನಡೆಸುವ ಮೂಲಕ ಸಮಸ್ಯೆಗಳಿಗದೆ ಪರಿಹಾರ ರೂಪಿಸುವ ಕ್ರಿಯಾ ಯೋಜನೆಯೊಂದನ್ನು ಸಿದ್ದಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಬಳ್ಳಾರಿಗಳಿಗೆ ಭೇಟಿ ನೀಡಿದ್ದು ಇನ್ನುಳಿದ ಗಡಿಭಾಗಗಳಿಗೆ ಸದ್ಯದಲ್ಲಿಯೇ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿರುವ ಅಧ್ಯಕ್ಷರು ಪ್ರಸ್ತುತ ಸಾಲಿನಲ್ಲಿ ಸರ್ಕಾರ ನೀಡಿರುವ 10 ಕೋಟಿ ರೂ. ಅನುದಾನವನ್ನು ಆಯಾ ಭಾಗದ ಸಮಸ್ಯೆಗಳನ್ನು ಅಭ್ಯಾಸ ಮಾಡಿ ಆದ್ಯತೆಯ ಮೇಲೆ ಪರಿಹಾರ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಬಳಸಲಾಗುವುದೆಂದರು.
ಗಡಿಯಂಚಿನ 52 ತಾಲ್ಲೂಕುಗಳ ಆಡಳಿತ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿ ಬೆಳವಣಿಗೆಗೆ ಪೂರಕವಾಗುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗುವುದೆಂದು ಚಂದ್ರಕಾಂತ ಬೆಲ್ಲದ ಅವರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)