ರೆಡ್ಡಿಗಳ ಕಣ್ಣು ಈಗ ಕೆಎಂಎಫ್ ಮೇಲೆ
ಎಸ್ ಎಂ ಕೃಷ್ಣ ಅಧಿಕಾರದ ಅವಧಿಯಲ್ಲಿ ಹೊರತುಪಡಿಸಿದರೆ ಕಳೆದ ಸುಮಾರು 15 ವರ್ಷಗಳಿಂದ ಮಹಾಮ೦ಡಳಿಯಲ್ಲಿ ದೇವೇಗೌಡರ ಮಗ ಎಚ್ ಡಿ ರೇವಣ್ಣ ಅವರದ್ದೇ ಏಕಚಕ್ರಾಧಿಪತ್ಯ. ಇದನ್ನು ಭೇದಿಸಲು ರೆಡ್ಡಿ ಸಹೋದರರು ಇದೀಗ ಹೊಸ ತಂತ್ರವನ್ನು ರೂಪಿಸಲು ಹೊರಟಿದ್ದಾರೆ. ತಮ್ಮೊಂದಿಗೆ ಮುನಿಸಿಕೊಂಡಿದ್ದ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿಗೆ ಮುಖ್ಯಮಂತ್ರಿಗಳು ಆ ಸ್ಥಾನದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸೋಮಶೇಖರ ರೆಡ್ಡಿ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ದೇವೇಗೌಡ ಕುಟುಂಬದ ವಿರುದ್ದ ಮೊದಲಿನಿಂದಲೂ ಕತ್ತಿ ಮಸೆಯುತ್ತಾ ಬಂದಿರುವ ರೆಡ್ಡಿ ಸಹೋದರರ ಪೈಕಿ ಎರಡನೆಯವರಾದ ಸೋಮಶೇಖರ ರೆಡ್ಡಿ , ಮೊದಲು ಈ ಮೂರು ಜಿಲ್ಲೆಗಳ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಗೊಂಡು ನಂತರ ರೇವಣ್ಣನವರನ್ನು ಆ ಸ್ಥಾನದಿಂದ ಕೆಳಗಿಳಿಸುವುದು ಸದ್ಯಕ್ಕೆ ಇವರ ಗುರಿ. "ಹಾಲು ಉತ್ಪಾದಕರಿಗೆ ಅನ್ಯಾಯವಾಗುತ್ತಿದೆ, ರೇವಣ್ಣ ಅವರ ಹಿಡಿತದಿಂದ ಒಕ್ಕೂಟವನ್ನು ಮುಕ್ತ ಗೊಳಿಸುತ್ತೇವೆ. ನಾವು ನ್ಯಾಯ ಒದಗಿಸುತ್ತೇವೆ ಎಂದು ಸೋಮಶೇಖರ ರೆಡ್ಡಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)