ಕುತ್ತಿಗೆಗೆ ಹಗ್ಗ ಬಿಗಿದು ಹಸುಗೂಸಿನ ಕೊಲೆ?
ಶಿವಮೊಗ್ಗ, ಜೂ. 16 : ಹಸುಗೂಸನ್ನು ಮನೆಯಲ್ಲಿಯೇ ಹೆತ್ತು ಆ ಮಗುವಿನ ಕುತ್ತಿಗೆಗೆ ಹಗ್ಗ ಬಿಗಿದು ಕೊಂದು ಚಾನಲ್ ಪಕ್ಕದ ಬೀದಿಗೆ ಬಿಸಾಡಿದ ಹೃದಯವಿದ್ರಾವಕ ಘಟನೆ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಜ್ಯೋತಿರಾವ್ ಬೀದಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ತನ್ನ ಹಸುಗೂಸನ್ನೇ ಕೊಂದ ಮಹಾತಾಯಿಯ ಹೆಸರು ಗೀತಮ್ಮ (32). ಈಕೆ ಮಂಜುನಾಥ್ ಎಂಬುವವರ ಪತ್ನಿಯಾಗಿದ್ದು, ಕಳೆದ 4 ವರ್ಷಗಳ ಹಿಂದೆ ದಾಂಪತ್ಯದಲ್ಲಿ ವಿರಸಗೊಂಡು ಇಬ್ಬರೂ ಬೇರೆ ಬೇರೆ ವಾಸವಾಗಿದ್ದರು. ಈ ನಡುವೆ ಅನೈತಿಕ ವ್ಯವಹಾರಗಳಲ್ಲಿ ತೊಡಗಿಕೊಂಡ ಗೀತಮ್ಮಳಿಗೆ ಹಸುಗೂಸು ಜನ್ಮಿಸಿದ ಕೆಲಕ್ಷಣಗಳಲ್ಲಿಯೇ ಅದನ್ನು ಕೊಲ್ಲುವ ಕ್ರೂರ ಮನೋಭಾವಕ್ಕೆ ಬಂದಳು. ತಕ್ಷಣವೇ ಹಗ್ಗವೊಂದನ್ನು ಮಗುವಿನ ಕುತ್ತಿಗೆಗೆ ಬಿಗಿದು ಕೊಂದಳು. ನಂತರದಲ್ಲಿ ಸತ್ತ ಒಂದು ದಿನದ ಮಗುವನ್ನು ಚಾನಲ್ನ ಪಕ್ಕದಲ್ಲಿ ಎಸೆದು ಬಂದಳೆಂದು ತಿಳಿದುಬಂದಿದೆ.
ಕೋಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಸ್ಥಳಕ್ಕೆ ಭೇಟಿ ನೀಡಿದ್ದು, ಇವರ ಪ್ರಕಾರ-ಮಗು ಜನ್ಮತಾಳುವಾಗಲೇ ಸತ್ತಿರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮಗುವನ್ನು ಕೊಂದಿರುವ ಲಕ್ಷಣಗಳು ಕಂಡುಬರುತ್ತಿಲ್ಲ ಎನ್ನುತ್ತಾರೆ.
ಆದರೆ, ಜನನವಾದ ನಂತರದಲ್ಲಿ ಪೊಲೀಸರು ಹೇಳುವಂತೆ ಆಕಸ್ಮಿಕ ಸಾವೆಂದು ನಂಬಬಹುದಾದರೂ ಮಗುವಿನ ಕುತ್ತಿಗೆಯಲ್ಲಿ ಹಗ್ಗ ಬಿಗಿಯುವ ಅವಶ್ಯಕತೆ ತಾಯಿ ಗೀತಮ್ಮನಿಗೆ ಯಾಕೆ ಬಂತು? ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಜನಿಸಿದ ಈ ಮಗುವಿನ ಅನಿವಾರ್ಯತೆ ತಾಯಿ ಗೀತಮ್ಮನಿಗೆ ಇರಲಿಲ್ಲವೋ ಅಥವಾ ಮಗು ಸಹಜವಾಗಿಯೇ ಸತ್ತಿತೋ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.