ತಾಲಿಬಾನ್ ಬಗ್ಗೆ ಎಚ್ಚರ : ಪಾಕಿಸ್ತಾನ
ಇಸ್ಲಾಮಾಬಾದ್, ಜೂ. 15 : ಉಗ್ರ ಸಂಘಟನೆ ತಾಲಿಬಾನ್ ತನ್ನ ಭಯೋತ್ಪಾದನಾ ಚಟುವಟಿಕೆಗಳನ್ನು ಭಾರತ ಮತ್ತು ಮದ್ಯಪ್ರಾಚ್ಯ ದೇಶಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಎಚ್ಚರಿಸಿದೆ. ತಾಲಿಬಾನ್ ಮಟ್ಟ ಹಾಕಲು ನಮಗೆ ಹಣಕಾಸಿನ ಅವಶ್ಯಕತೆಯಿದೆ, ಅಂತಾರಾಷ್ಟ್ರೀಯ ಸಮುದಾಯ ಈ ಸಂಘಟನೆಯನ್ನು ಮಟ್ಟಹಾಕಲು ಆರ್ಥಿಕ ಸಹಾಯ ನೀಡಲು ಮುಂದಾಗಬೇಕೆಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಕೇಳಿಕೊಂಡಿದ್ದಾರೆ.
ನಮಗೆ ತಾಲಿಬಾನ್ ಮಟ್ಟಹಾಕಲು ಮತ್ತು ಸ್ವಾತ್ ಕಣಿವೆಯಲ್ಲಿ ಶಾಂತಿ ತಹಬಂದಿಗೆ ತರಲು ತುರ್ತಾಗಿ 2.5 ಬಿಲಿಯನ್ ಡಾಲರ್ ಅವಶ್ಯಕತೆಯಿದೆ. ನಮ್ಮ ಮುಂಗಡಪತ್ರದಲ್ಲಿ 625 ಮಿಲಿಯನ್ ಡಾಲರ್ ಇದಕ್ಕಾಗಿ ಮೀಸಲಿಟ್ಟಿದ್ದೇವೆ. ಇಲ್ಲಿ ಉಗ್ರರು ಮತ್ತು ಪಾಕ್ ಸೇನೆಯ ನಡುವೆ ಹೋರಾಟ ಮುಂದುವರಿದಿದೆ. ಈ ಹೋರಾಟ ಕೊನೆಯ ಹಂತದಲ್ಲಿದ್ದು ಆದಷ್ಟು ಬೇಗ ನಮ್ಮ ಪಡೆ ಜಯ ಸಾಧಿಸುತ್ತದೆ ಎನ್ನುವ ವಿಶ್ವಾಸ ನಮಗಿದೆ ಎಂದು ಖುರೇಷಿ ಹೇಳಿದ್ದಾರೆ.
ತಾಲಿಬಾನ್ ಉಗ್ರರಿಗೆ ವಿಶ್ವ ಮಟ್ಟದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ಯೋಜನೆಯಿದೆ. ಈ ಸಂಘಟನೆಯ ಮೊದಲ ಗುರಿ ಭಾರತದಲ್ಲಿ ಅಶಾಂತಿ ನೆಲೆಸುವಂತೆ ಮಾಡುವುದು. ಅದಾದ ನಂತರ ಶ್ರೀಮಂತ ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಚಟುವಟಿಕೆ ಮುಂದುವರಿಸುವುದು. ಇದಕ್ಕಾಗಿ ಅಮೆರಿಕಾ ಕೂಡಾ ತೈಲ ರಾಷ್ಟ್ರಗಳು ಪಾಕಿಸ್ತಾನಕ್ಕೆ ಹೆಚ್ಚಿನ ಆರ್ಥಿಕ ಸಹಾಯ ನೀಡಬೇಕೆ೦ದು ಒತ್ತಡ ಹೇರುತ್ತಿದ್ದಾರೆಂದು ಖುರೇಷಿ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications