ಹಿಂದುತ್ವ ಕೈಬಿಡಿ : ಬಿಜೆಪಿಗೆ ವೈದ್ಯ ಕಿವಿಮಾತು
ನಾಗ್ಪುರ್, ಜೂ. 15 : ಹಿಂದುತ್ವ ನೀತಿಯ ಅಸ್ಥಿರತೆಗಾಗಿ ಬಿಜೆಪಿಯನ್ನು ಟೀಕಿಸಿದ ಹಿರಿಯ ಆರ್ಎಸ್ಎಸ್ ಚಿಂತಕ ಎಂ ಜಿ ಅಲಿಯಾಸ್ ಬಾಬುರಾವ್ ವೈದ್ಯ, ಜನಸಾಮಾನ್ಯರನ್ನು ಸೆಳೆಯುವಲ್ಲಿ ಪಕ್ಷ ಸೋತಿರುವ ಹಿನ್ನೆಲೆಯಲ್ಲಿ ಬಿಜೆಪಿ ಇನ್ನಾದರೂ ಹಿಂದುತ್ವದ ಸಿದ್ಧಾತದಿಂದ ಹಿಂದೆ ಸರಿಯುವುದು ಲೇಸೆಂದು ಹೇಳಿದ್ದಾರೆ.
ಮರಾಠಿ ಪತ್ರಿಕೆ ಅಂಕಣಕಾರರಾಗಿರುವ ವೈದ್ಯ ತಮ್ಮ ಲೇಖನದಲ್ಲಿ ಬಿಜೆಪಿ ಬಗ್ಗೆ ಬರೆಯುತ್ತಾ, ಹಿಂದೆ ಜನ ಸಂಘವೆಂದು ಕರೆಯಲ್ಪಡುತ್ತಿದ್ದ ಪಕ್ಷ ಬಳಿಕ ಬಿಜೆಪಿಯಾಯಿತು. ಗಾಂಧಿ ಪ್ರಣೀತ ಸಮಾಜವಾದವನ್ನು ಒಪ್ಪಿಕೊಂಡರೂ ಬಿಜೆಪಿಗೆ ಅಂಟಿದ ಕೋಮುವಾದಿ ಪಕ್ಷವೆಂಬ ಹಣೆಪಟ್ಟಿ ಮಾತ್ರ ದೂರವಾಗಿಲ್ಲ ಎಂದಿದ್ದಾರೆ. 1984ರ ಚುನಾವಣೆಯ ಬಳಿಕ ಬಿಜೆಪಿ ಮತ್ತೆ ಹಿಂದುತ್ವದ ಮಂತ್ರಿ ಜಪಿಸತೊಡಗಿತು. ಬಿಜೆಪಿ ಎಷ್ಟೇ ಹರಸಾಹಸಪಟ್ಟರೂ ಅಧಿಕಾರ ಸೂತ್ರ ಹಿಡಿಯುವುದು ಅದರಿಂದ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಪಕ್ಷ ದ ಕಾರ್ಯಕರ್ತರು ತಾಳ್ಮೆ ಕಳೆದುಕೊಂಡರು. ಹಿಂದುತ್ವ ಕ್ರಮೇಣ ಅವರಿಗೆ ಮರೆತುಹೋಯಿತು ಎಂದು ಆರ್ಎಸ್ಎಸ್ ಮಾಜಿ ವಕ್ತಾರ ಅಭಿಪ್ರಾಯಪಟ್ಟಿದ್ದಾರೆ.
1999ರಲ್ಲಿ ಬಿಜೆಪಿ ಗೆದ್ದು ಅಧಿಕಾರ ಸೂತ್ರ ಹಿಡಿಯುತು. ಅದು 2004 ರಲ್ಲಿ ಮತ್ತೆ ಸೋತಿತು. ಆಗ ಪಕ್ಷಕ್ಕೆ ಮತ್ತೆ ಹಿಂದುತ್ವ ನೆನಪಾಯಿತು. ಕಳೆದ ಲೋಕಸಭೆ ಚುನಾವಣೆಯ ಪಕ್ಷದ ಪ್ರಣಾಳಿಕೆಯಲ್ಲಿ ಬಿಜೆಪಿ ಹಿಂದುತ್ವದ ಬಗ್ಗೆ ಹೇಳಿಕೊಂಡಿತ್ತು. ಆದರೆ, ಜನಸಾಮಾನ್ಯರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ವಿಫಲವಾಯಿತು ಎಂದ ವೈದ್ಯ, ಹಿಂದುತ್ವದ ನಿಜವಾದ ಅರ್ಥವೇನು ಎನ್ನುವುದನ್ನು ಜನರಿಗೆ ತಿಳಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದಿದ್ದಾರೆ.
(ಏಜನ್ಸೀಸ್)












Click it and Unblock the Notifications