ಗೆದ್ದ ಈಶ್ವರಪ್ಪ : ರೆಡ್ಡಿಗಳ ಬೇಡಿಕೆಗೆ ಮನ್ನಣಿ ಇಲ್ಲ
ಬೆಂಗಳೂರು, ಜೂ. 12 : ಸ್ವತಂತ್ರವಾಗಿ ಓಡುತ್ತಿರುವ ಯಡಿಯೂರಪ್ಪ ಸರಕಾರಕ್ಕೆ ಕಡಿವಾಣ ಹಾಕಲು ಉನ್ನತ ಸಮಿತಿ (ಕೋರ್ ಕಮೀಟಿ) ರಚನೆಯಾಗಬೇಕೆಂಬ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಅವರ ಬೇಡಿಕೆ ಈಡೇರುವ ಸಾಧ್ಯತೆಯಿದೆ. ಬಿಜೆಪಿ ಭಿನ್ನಮತ ಶಮನಕ್ಕೆ ಆಗಮಿಸಿದ್ದ ಪಕ್ಷದ ಹಿರಿಯ ಮುಖಂಡ ಅರುಣ್ ಜೈಟ್ಲಿ ಅವರು ಈಶ್ವರಪ್ಪ ಅವರ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದೊಳಗಿನೆ ಭಿನ್ನಾಭಿಪ್ರಾಯ ಬಗೆಹರಿಸಲು ಗುರುವಾರ ದಿಲ್ಲಿಯಿಂದ ಆಗಮಿಸಿದ ಜೈಟ್ಲಿ, ನಗರದ ಪಂಚತಾರಾ ಹೋಟೆಲ್ ವೊಂದರಲ್ಲಿ ಇಡೀ ದಿನ ಕಸರತ್ತು ನಡೆಸಿದರು. ಯಡಿಯೂರಪ್ಪ ಪರ ಹಾಗೂ ವಿರೋಧಿ ಗುಂಪಿನ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ನಿಗಮ ಮಂಡಳಿ ನೇಮಕ, ವರ್ಗಾವಣೆ ಸೇರಿದಂತೆ ಸರಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಮಿತಿ ರಚನೆಯಾಗಬೇಕು ಎಂಬುದು ಭಿನ್ನರ ಬೇಡಿಕೆಯಾಗಿತ್ತು. ಸಂಪುಟದಿಂದ ಆರು ಸಚಿವರನ್ನು ಕೈಬಿಡಬೇಕು. ಮಹತ್ವದ ಖಾತೆಗಳು ತಮ್ಮ ಪಾಲಾಗಬೇಕು ಎಂಬುದು ಬಳ್ಳಾರಿ ಸಚಿವತ್ರಯರ ಒತ್ತಾಯವಾಗಿತ್ತು. ಆದರೆ, ಈಶ್ವರಪ್ಪ ಬೇಡಿಕೆಗೆ ಮನ್ನಣೆ ಸಿಗುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)