ಮನುಷ್ಯ ಜಾತಿ ತಾನೊಂದೇ ವಲಂ : ಕಲಾ ಪ್ರದರ್ಶನ
ಬೆಂಗಳೂರು, ಮೇ 30 : ಧ್ವನಿ - ಬೆಳಕು ದೃಶ್ಯ ವೈಭವಗಳ ರೂಪಕ 'ಮನುಷ್ಯ ಜಾತಿ ತಾನೊಂದೇ ವಲಂ' ಕಾರ್ಯಕ್ರಮದ ಮತ್ತೆರಡು ಪ್ರದರ್ಶನಗಳನ್ನು ರಾಜ್ಯ ವಾರ್ತಾ ಇಲಾಖೆ ನಗರದ ಲಾಲ್ಬಾಗ್ನಲ್ಲಿ ಮೇ 31 ಮತ್ತು ಜೂನ್ 1ರಂದು ಲಾಲ್ಬಾಗ್ನಲ್ಲಿ ಆಯೋಜಿಸಿದೆ.
ಲಾಲ್ಬಾಗ್ನ ಕೆಂಗಲ್ ಹನುಮಂತಯ್ಯ ಜೋಡಿ ರಸ್ತೆಯ ದ್ವಾರದ ಸಮೀಪದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಕಲಾವಿದರು ಸಂಜೆ 6.30 ಗಂಟೆಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.
ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶು ಕುಮಾರ್ ಅವರ ಪರಿಕಲ್ಪನೆಯ ಈ ದೃಶ್ಯ ವೈಭವವನ್ನು ರಂಗಾಯಣ ಖ್ಯಾತಿಯ ಸಿ. ಬಸವಲಿಂಗಯ್ಯ ಅವರು ನಿರ್ದೇಶಿಸಿದ್ದಾರೆ. ಹೆಸರಾಂತ ರಂಗ ವಿನ್ಯಾಸಗಾರ ಪರೇಶ್ ಕುಮಾರ್ ಅವರ ಮನಪುಳಕಿಸುವ ಬೆಳಕಿನ ಲೋಕ ಮತ್ತು ಸುಪ್ರಸಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರ ಕಿವಿದುಂಬುವ ಸಂಗೀತ ಈ ಕಾರ್ಯಕ್ರಮದ ವಿಶೇಷತೆಗಳಾಗಿವೆ.
ಹತ್ತನೆಯ ಶತಮಾನದ ಆದಿ ಕವಿ ಪಂಪನಿಂದ ಇಪ್ಪತ್ತನೆಯ ಶತಮಾನದ ರಾಷ್ಟ್ರಕವಿ ಕುವೆಂಪುವರೆಗೆ ಎಲ್ಲರೂ ಪ್ರತಿಪಾದಿಸಿದ್ದು ಒಂದೇ. ಅದುವೇ ಮಾನವತಾವಾದ. ಎಲ್ಲಾ ಮಾನವರೂ ಒಂದೇ ಎಂಬ ಸಾಮಾಜಿಕ ಸಂದೇಶವನ್ನು ಸಾರುವ ಈ ದೃಶ್ಯ ರೂಪಕವನ್ನು ನೋಡುಗರು ಮನದೊಳಗೆ ಹೊತ್ತು ಮನೆ ಮನೆಗೆ ಕೊಂಡೊಯ್ಯುತ್ತಾರೆ ಎಂದು ಈಗಾಗಲೇ ಹಲವು ವಿಮರ್ಶಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications