ಕೇಂದ್ರ ಸಂಪುಟ ವಿಸ್ತರಣೆ ಮುಂದೂಡಿಕೆ?
ಬೆಂಗಳೂರು, ಮೇ. 26 : ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಕೇಂದ್ರ ಸಚಿವ ಹಾಗೂ ಕೋಲಾರ ಲೋಕಸಭೆ ಕ್ಷೇತ್ರದ ಸಂಸದ ಕೆ ಎಚ್ ಮುನಿಯಪ್ಪ ಕೇಂದ್ರದ ಸಚಿವ ಸ್ಥಾನಕ್ಕೆ ಚಾತಕಪಕ್ಷಿಯಂತೆ ಕಾದು ಕುಳಿತಿರುವ ಬೆನ್ನಲ್ಲೇ ಸಂಪುಟವನ್ನು ಬುಧವಾರ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.
ಪಂಜಾಬ್ ನಲ್ಲಿ ನಡೆಯುತ್ತಿರುವ ಸಿಖ್ಖರ ಹಿಂಸಾಚಾರ ಮತ್ತು ಪಶ್ಚಿಮ ಬಂಗಾಲ, ಒರಿಸ್ಸಾ ಮತ್ತು ಆಂಧ್ರಪ್ರದೇಶಕ್ಕೆ ಅಪ್ಪಳಿಸಿರುವ ಚಂಡಮಾರುತದಿಂದ ಸಂಪುಟ ವಿಸ್ತರಣೆ ಮುಂದೂಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯ ನೀಡುವ ವಿಚಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಗಮನದಲ್ಲಿದ್ದು, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಖರ್ಗೆ ಸ್ಥಾನ ಸಿಗುವುದು ಖಚಿತ ಎಂದು ಹೈಕಮಾಂಡ್ ಮೂಲಗಳು ತಿಳಿಸಿವೆ.
ಅಲ್ಲದೇ, ಕಾರ್ಯಕ್ರಮ ಮುಂದೂಡಲು ಮುಖ್ಯ ಕಾರಣವೆಂದರೆ, ಇಂದು ಮಂಗಳವಾರ, ಮಂಗಳವಾರವೆಂದರೆ ಅಶುಭ ಎಂಬ ನಂಬಿಕೆ. ಈ ಕಾರಣದಿಂದ ಅನೇಕ ಸಂಸದರು ಇಂದು ಪ್ರಮಾಣ ವಚನ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ಮುಂದಕ್ಕೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.
(ಏಜನ್ಸೀಸ್)