ಬುಧವಾರ ರಾಜಶೇಖರರೆಡ್ಡಿ ಪ್ರಮಾಣ ವಚನ ಸ್ವೀಕಾರ
ಹೈದರಾಬಾದ್, ಮೇ. 19 : ಆಂಧ್ರಪ್ರದೇಶದಲ್ಲಿ ಭರ್ಜರಿ ಜಯಗಳಿಸಿರುವ ವೈ ಎಸ್ ರಾಜಶೇಖರರೆಡ್ಡಿ ಇನ್ನೊಂದು ಅವಧಿ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಏರ್ಪಡಿಸಲಾಗಿರುವ ಭವ್ಯ ಸಮಾರಂಭದಲ್ಲಿ ರಾಜಶೇಖರರೆಡ್ಡಿ ಬುಧವಾರ ಸಂಜೆ 7 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜ್ಯೋತಿಷಿಗಳ ಪ್ರಕಾರ ಬೆಳಗ್ಗೆ 8 ಗಂಟೆಯೊಳಗೆ ಇಲ್ಲವೇ ಸಂಜೆ 7 ಗಂಟೆ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಉತ್ತಮ ಗಳಿಗೆ ಇದೆ ಎಂದಿರುವುದರಿಂದ ರಾಜಶೇಖರರೆಡ್ಡಿ ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಸರಕಾರವನ್ನು ವಜಾಗೊಳಿಸುವಂತೆ ರಾಜಶೇಖರರೆಡ್ಡಿ ಹಾಗೂ ಸಚಿವ ಸಂಪುಟದ ಎಲ್ಲ ಸಚಿವರ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಎನ್ ಡಿ ತಿವಾರಿ ಅವರಿಗೆ ಇಂದು ನೀಡಿದ್ದಾರೆ. ಹೊಸ ಸರಕಾರ ರಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೇ 20 ರಂದು ರಾಜಶೇಖರರೆಡ್ಡಿ ಅವರೊಬ್ಬರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇ 21 ರಂದು ಮಾಜಿ ಪ್ರಧಾನಿ ರಾಜೀವಗಾಂಧಿ ಹತ್ಯೆಗೀಡಾದ ದಿನ. ಈ ದಿನದಿಂದು ನೂತನ ಸರಕಾರದ ಯಾವುದೇ ಕಾರ್ಯಕ್ರಮಗಳನ್ನು ನಡೆಸದಿರಲು ರೆಡ್ಡಿ ನಿರ್ಧರಿಸಿದ್ದಾರೆ. ಮೇ 22 ರಂದು ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವಿದೆ ಎಂದು ಮೂಲಗಳು ತಿಳಿಸಿವೆ.
(ಏಜನ್ಸೀಸ್)