ಸೋಮಣ್ಣ ಮಂತ್ರಿ, ಕೃಷ್ಣಯ್ಯ ಶೆಟ್ಟಿ ಕೊಕ್
ಬೆಂಗಳೂರು, ಮೇ. 18 : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಪುನರ್ ರಚನೆ ಚಟುವಟಿಕೆಗಳು ಆರಂಭವಾಗಿವೆ. ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬಿಬಿಎಂಪಿ ಚುನಾವಣೆಗಳನ್ನು ಅಗಸ್ಟ್, ಇಲ್ಲವೇ ಸೆಪ್ಟೆಂಬರ್ ನಲ್ಲಿ ನಡೆಸುವ ಉದ್ದೇಶ ಹೊಂದಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಸಿದ್ದತೆ ನಡೆಸುವ ಉದ್ದೇಶದಿಂದ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ವಿ ಸೋಮಣ್ಣ ಅವರನ್ನು ಸಂಪುಟ ತೆಗೆದುಕೊಳ್ಳಲು ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ. ಜೂನ್ ತಿಂಗಳಲ್ಲಿ ಸಂಪುಟ ಪುನರ್ ರಚನೆ ಮಾಡಬೇಕು ಎಂಬ ಯೋಚನೆಯಲ್ಲಿರುವ ಸಿಎಂ ಸಂಪುಟದ ಕೆಲ ಮಂತ್ರಿಗಳಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮಹಾಶಿವರಾತ್ರಿಯಂದು ರಾಜ್ಯದ ಎಲ್ಲಾ ಶಿವ ದೇವಾಲಯದ ಮೂಲಕ ಪವಿತ್ರ ಗಂಗಾಜಲ ಹಂಚಿ ಸುದ್ದಿ ಮಾಡಿದ್ದ ದೇವರ ಮಂತ್ರಿ ಎಂದೇ ಖ್ಯಾತಿ ಪಡೆದಿರುವ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ತಲೆದಂಡವಾಗಲಿದೆ ಎನ್ನುವ ಸುದ್ದಿ ಇದೆ. ಅಲ್ಲದೇ ಗುಲ್ಬರ್ಗಾದಲ್ಲಿ ಖರ್ಗೆ ವಿರುದ್ಧ ಸೋತಿರುವ ಪಶು ಸಂಗೋಪನ ಸಚಿವ ರೇವೂ ನಾಯಕ ಬೆಳಮಗಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಆದರೆ, ರೇವೂ ನಾಯಕ್ ಅವರ ರಾಜೀನಾಮೆಯನ್ನು ಪಡೆಯುವ ಉದ್ದೇಶ ಮುಖ್ಯಮಂತ್ರಿಗಳಿಲ್ಲ ಎನ್ನಲಾಗಿದೆ.
ಕೃಷ್ಣಯ್ಯ ಶೆಟ್ಟಿ ಬಿಟ್ಟರೆ, ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಡಿ ಸುಧಾಕರ್ ಹಾಗೂ ಎಂ ಪಿ ನರೇಂದ್ರಸ್ವಾಮಿ ಅವರಲ್ಲಿ ಒಬ್ಬರು ಅಥವಾ ಇಬ್ಬರನ್ನು ಕೈಬಿಡುವ ಯೋಚನೆಯನ್ನು ಯಡಿಯೂರಪ್ಪ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರಸ್ವಾಮಿ ಕಾಂಗ್ರೆಸ್ ಪ ಕೆಲಸ ಮಾಡಿದ್ದಾರೆ. ಹಾಗೂ ಗೂಳಿಹಟ್ಟಿ ಶೇಖರ್ ಮುಖ್ಯಮಂತ್ರಿಗಳ ವಿರುದ್ಧ ಶೀತಲ ಸಮರ ಮುಂದುವರೆಸಿರುವುದು ಇದಕ್ಕೆ ಕಾರಣವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications