ರಂಗಾಯಣದಲ್ಲಿ ರಂಗ ಶಿಕ್ಷಣ ಅಭಿಯಾನ
ಮೈಸೂರು, ಮೇ. 5: ಮೇ 10 ರಿಂದ ಜೂನ್ 14 ರವರೆಗೆ ರಂಗಾಯಣದ "ಭೂಮಿಗೀತ" ರಂಗಮಂದಿರದಲ್ಲಿ "ಗ್ರೀಷ್ಮ ರಂಗೋತ್ಸವ - 2009"ನಡೆಯಲಿದೆ. ಈ ಬಗ್ಗೆ ಮಾಹಿತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರು ಸವಿವರವಾಗಿ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸ್ ಆರಂಭದ ಉದ್ದೇಶ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದೊಡನೆ ರಂಗ ಶಿಕ್ಷಣದಲ್ಲಿ 3 ವರ್ಷಗಳ ಡಿಪ್ಲೊಮಾ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ. ಮೊದಲ ವರ್ಷ ಪೂರೈಸಿದ ನಂತರ ಕನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಿದೆ. ನಂತರ 2 ವರ್ಷಗಳ ತರಬೇತಿಯನ್ನು ರಂಗಾಯಣದಲ್ಲಿ ನೀಡಲಾಗುವುದು.
ಮೊದಲ ವರ್ಷ ವಸತಿ ಸಹಿತ ರು.1500/- ಗಳ ಶಿಷ್ಯ ವೇತನವನ್ನು ಹಾಗೂ 2 ಮತ್ತು 3ನೇ ವರ್ಷದಲ್ಲಿ ವಸತಿ ಸೌಲಭ್ಯ ಇಲ್ಲದ ಪ್ರಯುಕ್ತ ರು.5000/-ಗಳ ಮಾಸಿಕ ಶಿಷ್ಯ ವೇತನ ನೀಡಲಾಗುವುದು ಎಂದು ತಿಳಿಸಿದ ಅವರು ಧಾರವಾಡ ರಂಗಾಯಣ ಘಟಕದಲ್ಲಿಯೂ ರಂಗ ಶಿಕ್ಷಣ ತರಬೇತಿಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ಸಭೆ ಸಮಾರಂಭ)