ಮಹಿಮಾ ಪಟೇಲರಿಂದ ಜನಜಾಗೃತಿ ಅಭಿಯಾನ

ಅಭಿಯಾನ ಪ್ರಾರಂಭಿಸುವ ಮೊದಲು ಯಾಗ ನಡೆಸಿದ ಮಹಿಮಾ, ಚುನಾವಣಾ ಅಕ್ರಮಗಳ ವಿರುದ್ಧ ಜನ ಜಾಗೃತರಾಗಬೇಕು ಮತ್ತು ಅರ್ಹ ವ್ಯಕ್ತಿಗೆ ಮತ ನೀಡಬೇಕು ಎಂದು ಅಭಿಯಾನದ ಉದ್ದೇಶ ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ಕೋಟಿ ಕೋಟಿ ಹಣ ದುರುಪಯೋಗವಾಗುತ್ತಿದೆ. ಇದನ್ನು ಜನರೇ ತಡೆಯಬೇಕು. ಈಗನ ಕಾಲದಲ್ಲಿ ಯಾರು ಕಡಿಮೆ ಕೆಟ್ಟ ವ್ಯಕ್ತಿ ಎಂಬುದನ್ನು ನೋಡುವ ಪರಿಸ್ಥಿತಿ ಎದುರಾಗಿದೆ. ಇದರ ಬದಲಾಗಿ ಒಳ್ಳೆಯ ಮತ್ತು ಅರ್ಹ ವ್ಯಕ್ತಿಯನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು.
ಯಾವುದೇ ಪಕ್ಷದ ಪರ ನಿಲ್ಲದ, ಹಣ ಹಂಚುವ ದುರ್ವ್ಯವಹಾರದಲ್ಲಿ ತೊಡಗದ ಅರ್ಹ ವ್ಯಕ್ತಿಗೆ ಜನ ಮತ ಹಾಕಬೇಕು. ಬದಲಾಗಿ ಮತದಾರರೇ ತಮಗೆ ತೋಚಿದಷ್ಟು ಹಣ ಅಭ್ಯರ್ಥಿಗೆ ನೀಡಿ ಮತ ನೀಡಬೇಕು. ಇದರಿಂದ ಅಭ್ಯರ್ಥಿಗೂ ಜನರ ಬಗ್ಗೆ ಬದ್ಧತೆ ಮತ್ತು ಜವಾಬ್ದಾರಿ ಬಂದಂತಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ 28 ಕ್ಷೇತ್ರಗಳಲ್ಲಿ ಮನೆಮನೆಗೂ ತೆರಳಿ ಜಾಗೃತಿ ಎಬ್ಬಿಸುವುದಾಗಿ ಅವರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚೆನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಮಹಿಮಾ ಸೋತಿದ್ದರು. ನಂತರ ಮೌನವ್ರತ ಮತ್ತು ಪಾದಯಾತ್ರೆಯ ಮುಖಾಂತರ ಗಮನ ಸೆಳೆಯಲು ಯತ್ನಿಸಿದ್ದರು. ಇತ್ತೀಚೆಗೆ ಪತ್ರಕರ್ತರಿಗೆ ಆಮಿಷ ತೋರಿಸಿ ತಮಗರಿವಿಲ್ಲದಂತೆ ವಿವಾದಕ್ಕೆ ನಾಂದಿ ಹಾಡಿದ್ದರು. ಸದ್ಯಕ್ಕೆ ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಿಲ್ಲ ಮತ್ತು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications