ಏ.30ರಂದು ಶಿವಮೊಗ್ಗದಲ್ಲಿ ಜಾತ್ರೆ, ಉತ್ಸವ ನಿಷೇಧ
ಶಿವಮೊಗ್ಗ, ಏಪ್ರಿಲ್. 11 : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ದಿನಾಂಕಗಳಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ವಾರದಂತೆ ಹಾಗೂ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಅವರು ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆ ಮತದಾನ ಏಪ್ರಿಲ್ 30 ರಂದು ಮತ ಎಣಿಕೆ ಮೇ 16 ರಂದು ನಡೆಯುವುದರಿಂದ ಈ ದಿನಾಂಕಗಳಲ್ಲಿ ನಡೆಯುವ ಜಾತ್ರೆ, ಉತ್ಸವ , ವಾರದ ಸಂತೆಗಳನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಏಪ್ರಿಲ್ 30 ರಂದು ನಡೆಯುವ ಭದ್ರವತಿ ತಾಲ್ಲೂಕಿನ ಆನವೇರಿ ಗ್ರಾಮದ ವಾರದ ಸಂತೆ, ಶಿವಮೊಗ್ಗ ತಾಲ್ಲೂಕು ಕಾಚಿನಕಟ್ಟೆ, ಹಾರನಹಳ್ಳಿ, ಸಾಗರ ಟೌನ್, ಶಿಕಾರಿಪುರ ತಾಲ್ಲೂಕಿನ ತೋಗರ್ಸಿ ವಾರದ ಸಂತೆಗಳನ್ನು ನಿಷೇಧಿಸಲಾಗಿದೆ. ಹಾಗೂ ಏಪ್ರಿಲ್ 30 ರಂದು ನಡೆಯಲಿರುವ ಹೊಸನಗರ ತಾಲ್ಲೂಕಿನ ಕಾರಣಗಿರಿ (ಹನಿಯಾ ) ಸಿದ್ದಿವಿನಾಯಕ ದೇವರ ರಥೋತ್ಸವವನ್ನು ಸಹ ನಿಷೇಧಿಸಿದೆ.
ಇದೇ ರೀತಿ ಮೇ 16 ರಂದು ನಡೆಯಲಿರುವ ಸಾಗರ ತಾಲ್ಲೂಕಿನ ತಾಳಗುಪ್ಪ ವಾರದ ಸಂತೆ, ಶಿಕಾರಿಪುರ, ಹೊಸನಗರ ಪಟ್ಟಣ ಹಾಗೂ ಸೊರಬ ತಾಲ್ಲೂಕಿನ ಆನವಟ್ಟಿಗಳಲ್ಲಿ ವಾರದ ಸಂತೆಯನ್ನು ಅಂದು ನಡೆಸಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications