ಬಳ್ಳಾರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲ್ಲ, ಕುಮಾರಣ್ಣ
ಬೆಂಗಳೂರು, ಏ. 3 : ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯುದಿಲ್ಲ ಎನ್ನುವ ಖಾತ್ರಿಯ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಅವರು ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಬಿಜೆಪಿಯ ಹಣದ ಮುಂದೆ ಎಲ್ಲ ಕಾನೂನುಗಳು ಶರಣಾಗತಿಯಾಗಿವೆ ಎಂದರು. ಬಳ್ಳಾರಿ ರಾಜ್ಯದಲ್ಲಿ ಕುಖ್ಯಾತಿ ಗಳಿಸಿದ ಜಿಲ್ಲೆ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಕಪ್ಪು ಹಣ ಮತದಾರರಿಗೆ ಈಗಾಗಲೇ ಸರಬರಾಜು ಆಗುತ್ತಿದೆ. ಅಲ್ಲಿನ ಹಣಬಲ ಹಾಗೂ ತೋಳ್ಬಲದ ಮುಂದೆ ಸ್ಪರ್ಧೆ ಆಸಾಧ್ಯ. ಈ ಅಂಶಗಳನ್ನು ಪರಿಗಣಿಸಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ವಿವರಿಸಿದರು.
ವಿವಾದ ಪ್ರದೇಶವಾಗಿರುವ ಎಂಎಸ್ ಪಿಎಲ್ ಗಣಿಗಾರಿಕೆ ಪ್ರದೇಶ ಭೇಟಿ ನೀಡಿರುವ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಅಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಗ್ಗೆ ತಿಳಿದುಕೊಳ್ಳಲು ಹೋಗಿದ್ದೆ, ವಿನಃ ಬೇರೆ ಯಾವ ಕಾರಣ ಅಲ್ಲ. ಈ ಬಗ್ಗೆ ಟೀಕೆ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ಕುಮಾರಸ್ವಾಮಿ ಎಂ ಎಸ್ ಪಿಎಲ್ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಸಚಿವ ಜನಾರ್ದನರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೆಡಿಎಸ್ ವರಿಷ್ಠ ದೇವೇಗೌಡ ಕೂಡಾ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications