ಬಂಗಾರಪ್ಪ ವಿರುದ್ಧ ಹರಿಹಾಯ್ದ ರಾಘವೇಂದ್ರ
ಶಿವಮೊಗ್ಗ, ಮಾ. 24 : ರಾಜ್ಯದ ಸಚಿವರಾಗಿ, ಮುಖ್ಯಮಂತ್ರಿಯಾಗಿ, ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಯಾವ ಅಭಿವೃದ್ದಿ ಕೆಲಸ ಮಾಡಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಸೊರಬ ತಾಲ್ಲೂಕು ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆ. ಇಂತಹ ನಾಯಕರಿಂದ ಇನ್ನೇನೂ ಹೆಚ್ಚಿನ ಕೆಲಸಗಳನ್ನು ನಿರೀಕ್ಷಿಸಬಹುದು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಎಂ ಯಡಿಯೂರಪ್ಪ ಅವರ ಮಗ ಬಿ ವೈ ರಾಘವೇಂದ್ರ ಅವರು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಪರಿ ಇದು.
ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ನಗರ ಬಿಜೆಪಿ ಮಹಿಳಾ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಅಭಿವೃದ್ಧಿ ಎಂದರೇನೆಂಬುದು ಇವರಿಗೆ ಗೊತ್ತಿಲ್ಲ. ತಮ್ಮ ಕ್ಷೇತ್ರವನ್ನೇ ಅಭಿವೃದ್ಧಿ ಪಡಿಸದೆ ಇರುವವರಿಗೆ ಇನ್ನೇನು ಮಾಡಲು ಸಾಧ್ಯ, ಯಾವುದೇ ಸಂದರ್ಭದಲ್ಲಿಯೂ ಅಭಿವೃದ್ಧಿ ಕುರಿತಾದ ಪ್ರಮಾಣಿಕ ಕಾಳಜಿ ಇರಲಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಅಲೆ ಏಳುತ್ತಿದ್ದು, ಅಧಿಕಾರಕ್ಕಾಗಿ ಅಲ್ಲ, ಅಭಿವೃದ್ಧಿಗಾಗಿ ಜನರು ಮತ ನೀಡಬೇಕು ಎಂದ ಅವರು, ಸ್ವಾತಂತ್ರ್ಯ ಬಂದ ನಂತರ ಸ್ಲಂಗಳ ಹೊರತಾಗಿಯೂ ಏನನ್ನೂ ಮಾಡದ ಕಾಂಗ್ರೆಸ್, ಇದೀಗ ಭಾರತ್ ನಿರ್ಮಾಣ ಸಮಾವೇಶ ನಡೆಸತೊಡಗಿದೆ. ಕಾಂಗ್ರೆಸ್ ನಿರ್ಮಾಣ ಮಾಡುತ್ತಿಲ್ಲ, ನಿರ್ನಾಮ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)
ಸಿಎಂ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು












Click it and Unblock the Notifications