ಹಿಂದೂ ಸಮಾಜೋತ್ಸವ ನಿಷೇಧಿಸಿ, ಜೆಡಿಎಸ್ ಆಗ್ರಹ
ಬೆಂಗಳೂರು, ಮಾ. 18 : ವಿವಿಧ ಮಠಾದೀಶರು ಮತ್ತು ಧರ್ಮಾಧಿಕಾರಿಗಳು ಆಯೋಜಿಸುತ್ತಿರುವ ಹಿಂದೂ ಸಮಾಜೋತ್ಸವವನ್ನು ಚುನಾವಣ ಆಯೋಗ ಈ ಕೂಡಲೇ ನಿಷೇದಿಸಬೇಕು. ಇಂತಹ ಸಭೆ ಸಮಾರಂಭಗಳಿಂದ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗುತ್ತದೆ. ಈ ಸಮಾವೇಶಗಳಿಗೆ ಪರೋಕ್ಷವಾಗಿ ಬಿಜೆಪಿ ಬೆಂಬಲ ನೀಡುತ್ತಿದ್ದು, ಆಯೋಗ ಇದಕ್ಕೆ ಅವಕಾಶ ನೀಡಬಾರದು ಎಂದು ಜನತಾದಳ ವಕ್ತಾರ ವೈ ಎಸ್ ವಿ ದತ್ತಾ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಿಂದೂ ಮತ ಬ್ಯಾಂಕ್ ಸ್ಥಾಪಿಸುವುದು ಸಮಾವೇಶದ ಉದ್ದೇಶ ಎಂದು ಉಡುಪಿ ಪೇಜಾವರ ಶ್ರೀಗಳು ಹೇಳಿದ್ದಾರೆ. ಮೊನ್ನೆ ಮಂಗಳೂರಿನಲ್ಲಿ ನಡೆದ ಸಮಾವೇಶಕ್ಕೆ ರಾಜ್ಯ ಗೃಹಮಂತ್ರಿ ಆಚಾರ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಕೂಡ ಭಾಗವಹಿಸಿದ್ದರು.
ಇದು ಚುನಾವಣ ಲಾಭಕ್ಕಾಗಿ ಬಿಜೆಪಿ ಆಯೋಜಿಸಿರುವ ಸಮಾವೇಶ, ಈಗಾಗಲೇ ಈ ವಿಷಯವನ್ನು ಪೊಲೀಸ್ ಮಹಾನಿರ್ದೇಶಕರ ಗಮನಕ್ಕೂ ತಂದಿದ್ದೇವೆ. ಚುನಾವಣಾ ದೃಷ್ಟಿಯಿಟ್ಟುಕೊಂಡು ಆಯೋಜಿಸುವ ಈ ಸಮಾವೇಶಗಳಿಗೆ ಆಯೋಗ ಅವಕಾಶ ನೀಡಬಾರದು ಎಂದು ದತ್ತಾ ಮತ್ತು ಕಾಂಗ್ರೆಸ್ ಪಕ್ಷದ ರಾಮಚಂದ್ರಪ್ಪ ಆಯೋಗ ಆಯೋಜಿಸಿದ್ದ ಸಭೆಯಲ್ಲಿ ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications