ಪುತ್ತೂರಲ್ಲಿ ಎರಡು ಕೋಮಿನ ನಡುವೆ ಘರ್ಷಣೆ
ಪುತ್ತೂರು, ಮಾ. 17 : ಮಂಗಳೂರು ಪಬ್ ದಾಳಿ ಹಾಗೂ ಕೇರಳ ಶಾಸಕರ ಮಗಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಖ್ಯಾತಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ವಿವಾದದಿಂದ ಮುಕ್ತಿ ದೊರಕುವಂತೆ ಕಾಣುತ್ತಿಲ್ಲ.
ಈ ಎರಡೂ ಘಟನೆಗಳು ಮಾಸುವ ಮುನ್ನವೇ ಇಂದು ಮತ್ತೊಂದು ಘಟನೆ ನಡೆದಿದ್ದು, ಯುವತಿಯರನ್ನು ಮಾತನಾಡಿಸಿದ್ದಕ್ಕೆ ಅನ್ಯ ಕೋಮಿನ ಯುವಕರ ಮೇಲೆ ಹಲ್ಲೆ ನಡೆದಿದೆ. ಕಲ್ಲು ತೂರಾಟ ನಡೆದು, ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಈ ಯುವತಿಯರು ಮಂಗಳೂರಿನವರು ಎನ್ನಲಾಗಿದ್ದು, ಇಂದು ಪುತ್ತೂರಿಗೆ ಬಂದಿದ್ದರು. ಪಾರ್ಕ್ ನಲ್ಲಿ ಕುಳಿತಿದ್ದಾಗ ಅನ್ಯ ಕೋಮಿಗೆ ಸೇರಿದ ಯುವಕರು ಯುವತಿಯರನ್ನು ಮಾತನಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಇನ್ನೊಂದು ಕೋಮಿನ ಯುವಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗುಂಪು ಚೆದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡು ಹೊರಬಂದ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಠಾಣೆಯಲ್ಲಿಯೂ ಎರಡು ಕೋಮಿನ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಹಲ್ಲೆ ನಡೆಸಿದವರು ಭಜರಂಗದಳ ಸಂಘಟನೆಗೆ ಸೇರಿದ ಯುವಕರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)